
ಮೋಹನ್ ಭಾಗವತ್
ಜೈಪುರ: ‘ಸ್ವಯಂಸೇವಕರ ಸಮರ್ಪಣೆ ಮತ್ತು ತ್ಯಾಗವೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಶಕ್ತಿ. ಇಲ್ಲಿ ಪ್ರತಿಯೊಬ್ಬ ಸ್ವಯಂಸೇವಕನೂ ಮಾನಸಿಕವಾಗಿ ಮತ್ತು ಸ್ವಾಭಾವಿಕವಾಗಿ ಪ್ರಚಾರಕನಾಗಿ ಕೆಲಸ ಮಾಡುತ್ತಾನೆ’ ಎಂದು ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.
‘ಔರ್ ಯಾ ಜೀವನ್ ಸಂಪ್ರೀತ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ‘ರಾಜಸ್ಥಾನದ 24 ಮಂದಿ ದಿವಂಗತ ಪ್ರಚಾರಕರ ಜೀವನ ಪಯಣದ ಕಥಾಹಂದರವನ್ನು ಈ ಪುಸ್ತಕವು ಒಳಗೊಂಡಿದೆ’ ಎಂದರು.
‘ಸಂಘದ ವ್ಯಾಪ್ತಿ ವಿಸ್ತರಣೆಯಾದರೂ ಮತ್ತು ಕಾರ್ಯವಿಧಾನದಲ್ಲಿ ಸುಧಾರಣೆಗಳಾದರೂ ಅದರ ಮೂಲಭೂತ ಆಶಯವು ಬದಲಾಗದೆ ಹಾಗೆಯೇ ಉಳಿಯಲಿದೆ’ ಎಂದು ಹೇಳಿದರು.
‘ಇಂದು ಸಂಘವು ಬೆಳೆದಿದೆ. ಆದರೆ ಅದರದ್ದೇ ಆದ ಸವಾಲುಗಳನ್ನು ಎದುರಿಸುತ್ತಿದೆ. ವಿರೋಧ, ನಿರ್ಲಕ್ಷ್ಯ ಎದುರಿಸುತ್ತಿದ್ದ ಸಮಯದಲ್ಲಿ ಇದ್ದಂತೆಯೇ ನಾವು ಇರಬೇಕು. ಆ ಉತ್ಸಾಹ, ಚೈತನ್ಯವೇ ಸಂಘವನ್ನು ಮುಂದಕ್ಕೆ ಕೊಂಡೊಯ್ಯಲಿದೆ’ ಎಂದು ಅಭಿಪ್ರಾಯಪಟ್ಟರು.
‘ದೂರದಿಂದ ಆರ್ಎಸ್ಎಸ್ ಏನೆಂದು ಅರ್ಥವಾಗುವುದಿಲ್ಲ. ಹಲವರು ಸ್ಪರ್ಧೆಗಿಳಿದು ಆರ್ಎಸ್ಎಸ್ ರೀತಿಯ ಶಾಖೆಗಳನ್ನು ತೆರೆದರು. ಯಾರಿಗೂ 15 ದಿನಕ್ಕಿಂತ ಹೆಚ್ಚು ದಿನ ನಡೆಸಲಾಗಲಿಲ್ಲ. ನಮ್ಮ ಶಾಖೆಗಳು 100 ವರ್ಷಗಳಿಂದ ನಡೆಯುತ್ತಿವೆ ಮತ್ತು ಈಗಲೂ ಬೆಳೆಯುತ್ತಿವೆ. ಏಕೆಂದರೆ ಸಂಘವು ತನ್ನ ಸ್ವಯಂಸೇವಕರ ಸಮರ್ಪಣೆಯಿಂದಾಗಿ ಪ್ರಗತಿ ಸಾಧಿಸುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.