ADVERTISEMENT

ಅಯ್ಯಪ್ಪ ದರ್ಶನಕ್ಕಾಗಿ ಶಬರಿಮಲೆ ಹತ್ತಿದ್ದ ಮಹಿಳೆಯರನ್ನು ವಾಪಸ್ ಕಳುಹಿಸಿದ ಪೊಲೀಸ್

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 5:18 IST
Last Updated 16 ಜನವರಿ 2019, 5:18 IST
ಕೃಪೆ: ಫೇಸ್‍ಬುಕ್
ಕೃಪೆ: ಫೇಸ್‍ಬುಕ್   

ಶಬರಿಮಲೆ: ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರು ಬಲವಂತವಾಗಿ ವಾಪಸ್ಕಳುಹಿಸಿದ್ದಾರೆ. ಕಣ್ಣೂರು ಜಿಲ್ಲೆಯವರಾದ ರೇಷ್ಮಾ ಮತ್ತು ಶಾನಿಲಾ ಎಂಬ ಮಹಿಳೆಯರು ದೇಗುಲ ಪ್ರವೇಶಿಸಲು ಯತ್ನಿಸಿದ್ದು, ಇವರನ್ನು ಬಿಗಿ ಭದ್ರತೆಯಿಂದ ಪೊಲೀಸರು ವಾಪಸ್ ಕಳುಹಿಸಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಕಣ್ಣೂರು -ಕೋಯಿಕ್ಕೋಡ್ ನಿಂದ ಬಂದ ಎಂಟು ಅಯ್ಯಪ್ಪ ಭಕ್ತರು ಬುಧವಾರ ಮುಂಜಾನೆ ಶಬರಿಮಲೆಯೇರಿದ್ದರು.ಆದರೆ ಪ್ರತಿಭಟನಾಕಾರರು ನೀಲಮಲೆ ಬಳಿ ಆ ತಂಡದಲ್ಲಿದ್ದಮಹಿಳೆಯರಿಗೆ ತಡೆಯೊಡ್ಡಿದ್ದಾರೆ. ಮೊದಮೊದಲು ಐದು ಮಂದಿ ಈ ಮಹಿಳೆಯರ ವಿರುದ್ಧ ಶರಣಂ ಕೂಗಿ ಪ್ರತಿಭಟನೆ ನಡೆಸಿದ್ದು, ಆನಂತರ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಯಿತು. ಸಹಾಯಕ ಆಯುಕ್ತ ಎ. ಪ್ರದೀಪ್ ಕುಮಾರ್ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ,

ADVERTISEMENT

ಇತ್ತ ತಾವು ಅಯ್ಯಪ್ಪ ದರ್ಶನ ಪಡೆದೇ ತೀರುತ್ತೇವೆ ಎಂದು ಮಹಿಳೆಯರು ಹಠ ಹಿಡಿದು ನಿಂತರು. ಮೊದಲು ಪ್ರತಿಭಟನೆ ನಡೆಸಿದ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ತೆರವು ಮಾಡಿದ್ದರೂ ನಂತರ ಜನರುಗುಂಪಾಗಿ ಪ್ರತಿಭಟನೆ ಆರಂಭಿಸಿದರು.

ಮೂರು ಗಂಟೆಗಳ ನಂತರ ಪ್ರತಿಭಟನಾಕಾರರು ಪಟ್ಟು ಸಡಿಲಿಸದೇ ಇದ್ದಾಗ ಪೊಲೀಸರು ಬಲವಂತವಾಗಿರೇಷ್ಮಾ ಮತ್ತು ಶಾನಿಲಾಳನ್ನು ವಾಪಸ್ ಹೋಗುವಂತೆ ಹೇಳಿದ್ದಾರೆ.

ಧೋತಿ ಮತ್ತು ಶರ್ಟ್ ಧರಿಸಿ ಈ ಮಹಿಳೆಯರು ದೇವಾಲಯ ಪ್ರವೇಶಿಸಲು ಯತ್ನಿಸಿದ್ದರು.ಶಬರಿಮಲೆಯಲ್ಲಿ ಪ್ರತಿಭಟನೆಗಳು ಮುಂದುವರಿದಿವೆ.

ಮಹಿಳೆಯರನ್ನು ತಡೆದದ್ದುಅನ್ಯ ರಾಜ್ಯದ ಅಯ್ಯಪ್ಪ ಭಕ್ತರು

ಮಕರಜ್ಯೋತಿ ದರ್ಶನದ ಎರಡು ದಿನಗಳ ನಂತರ ಶಬರಿಮಲೆಗೆ ಬಂದು ಅಯ್ಯಪ್ಪ ದೇಗುಲ ಪ್ರವೇಶಿಸಲು ಯತ್ನಿಸಿದ್ದ ಮಹಿಳೆಯರನ್ನು ತಡೆದದ್ದು ಆಂಧ್ರ ಮತ್ತು ತಮಿಳುನಾಡಿನಿಂದ ಬದ ಅಯ್ಯಪ್ಪ ಭಕ್ತರು ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.

ನವೋತ್ಥಾನ ಕೇರಳಂ ಶಬರಿಮಲೆಯಿಲೆಕ್ಕ್ ಎಂಬ ಫೇಸ್‍ಬುಕ್ ಪೇಜ್‍ ಸಂಘಟನೆಯ ಶ್ರೇಯಸ್ ಕಣಾರನ್, ಸುಬ್ರಮಣ್ಯನ್ , ಸುಭನ್, ಮಿಥುನ್ , ಸಜೇಶ್ ಎಂಬವರೊಂದಿಗೆ ಶಾನಿಲಾ ಮತ್ತು ರೇಷ್ಮಾ ಶಬರಿಮಲೆ ತಲುಪಿದ್ದರು.

ಆಂಧ್ರ ಮೂಲದ 5 ಮಂದಿ, ಮಹಿಳೆಯರುಶಬರಿಮಲೆ ಹತ್ತುತ್ತಿರುವುದನ್ನು ಗುರುತಿಸಿ ಶರಣಂ ಕೂಗಿದ್ದಾರೆ.ಪೊಲೀಸರು ಇವರನ್ನು ತೆರವುಗೊಳಿಸಿ ಮಹಿಳೆಯರನ್ನು ಮುಂದಕ್ಕೆ ಕಳುಹಿಸಿದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಬಂದು ತಡೆದಿದ್ದಾರೆ.
ಕರ್ಪೂರಾರತಿ ಬೆಳಗಿ ಶರಣಂ ಕೂಗಿ ಇವರು ಮಹಿಳೆಯರಿಗೆ ತಡೆಯೊಡ್ಡಿದ್ದರು.ಕೊಯಂಬತ್ತೂರಿನ ಕೋವೈ ಧರ್ಮರಾಜ ಅರಶಂಪೀಠ ಮಠದ ಶ್ರೀ ಶ್ರೀ ಕೃಷ್ಣಮೂರ್ತಿ ಸ್ವಾಮಿ ಅವರ ನೇತೃತ್ವದಲ್ಲಿ ಶಬರಿಮಲೆಗೆ ಆಗಮಿಸಿದ್ದ 80 ಅಯ್ಯಪ್ಪ ಭಕ್ತರು ಪ್ರತಿಭಟನೆಯಲ್ಲಿ ಭಾಗಿಯಾದಾಗ ಪೊಲೀಸರು ಮಹಿಳೆಯರನ್ನು ಮುಂದೆ ಕರೆದೊಯ್ಯುವುದು ಕಷ್ಟವಾಯಿತು.

ಪ್ರತಿಭಟನಾಕಾರರನ್ನು ಬಲಪ್ರಯೋಗಿಸಿ ತೆರವು ಮಾಡವಂತೆ ಅನ್ಯ ರಾಜ್ಯದ ಭಕ್ತರನ್ನು ನೂಕಿದರೆ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಪೊಲೀಸರಿಗಿತ್ತು. ಹಾಗಾಗಿ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ವಾಪಸ್ ಹೋಗುವಂತೆ ಮಹಿಳೆಯರಿಗೆ ಪೊಲೀಸರು ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.