ADVERTISEMENT

ಬಿಜೆಪಿಯ ‘ಶಬರಿಮಲೆ ಉಳಿಸಿ ಯಾತ್ರೆ’ ಸಮಾರೋಪ

ನಾರಿ ಪ್ರವೇಶದ ವಿರುದ್ಧ ಭಾರಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 14:15 IST
Last Updated 15 ಅಕ್ಟೋಬರ್ 2018, 14:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸಿದ ಸುಪ್ರೀಂ ಕೋರ್ಟ್‌ ತೀರ್ಪು ಜಾರಿಯ ವಿರುದ್ಧದ ಪ್ರತಿಭಟನೆಯ ತೀವ್ರತೆಯನ್ನು ಬಿಜೆಪಿ ಇನ್ನಷ್ಟು ಹೆಚ್ಚಿಸಿದೆ. ಪಕ್ಷ ಆಯೋಜಿಸಿದ್ದಆರು ದಿನಗಳ ‘ಶಬರಿಮಲೆ ಉಳಿಸಿ ಯಾತ್ರೆ’ ಸೋಮವಾರ ಸಮಾರೋಪಗೊಂಡಿದ್ದು, ಬೃಹತ್‌ ರ್‍ಯಾಲಿಯನ್ನು ಸಂಘಟಿಸಲಾಯಿತು.

ಶಬರಿಮಲೆ ದೇವಸ್ಥಾನದ ಆಚರಣೆಗಳು ಮತ್ತು ಪರಂಪರೆಯನ್ನು ರಕ್ಷಿಸಲು ಬದ್ಧ ಎಂದು ಬಿಜೆಪಿ ಕೇರಳ ಘಟಕದ ಅಧ್ಯಕ್ಷ ಪಿ.ಎಸ್‌. ಶ್ರೀಧರನ್‌ ಪಿಳ್ಳೆ ಪುನರುಚ್ಚರಿಸಿದ್ದಾರೆ.

ರ್‍ಯಾಲಿಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿತ್ತು. ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸದೆ, ತೀರ್ಪನ್ನು ಜಾರಿಗೊಳಿಸಲು ಮುಂದಾಗಿರುವ ಕೇರಳ ಸರ್ಕಾರದ ವಿರುದ್ಧ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಮುಂದಿನ 24 ಗಂಟೆಗಳಲ್ಲಿ ಬಿಕ್ಕಟ್ಟಿಗೆ ಸರ್ಕಾರ ಪರಿಹಾರ ಕಂಡುಕೊಳ್ಳದಿದ್ದರೆ ಹೊಸತೊಂದು ಚಳವಳಿ ಆರಂಭಿಸುತ್ತೇವೆ ಎಂದು ಪಿಳ್ಳೆ ಪ್ರಕಟಿಸಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಶ್ರಮಿಸುತ್ತಿದೆ ಎಂಬ ಆಡಳಿತಾರೂಢ ಸಿಪಿಎಂ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ. ಭಕ್ತರ ಹಿತಾಸಕ್ತಿಯನ್ನು ರಕ್ಷಿಸುವ ಕೆಲಸವನ್ನಷ್ಟೇ ಬಿಜೆಪಿ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶವನ್ನು ನೆಪವಾಗಿ ಇರಿಸಿಕೊಂಡು ಶಬರಿಮಲೆಯ ಮಹತ್ವವನ್ನು ನಾಶ ಮಾಡಲು ಸಿಪಿಎಂ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜಕೀಯ ಪಕ್ಷಗಳ ಜತೆಗೆ ಗುರುತಿಸಿಕೊಂಡಿಲ್ಲದ ಹಲವು ಸಂಘಟನೆಗಳು ಕೂಡ ಪ್ರತಿಭಟನೆ ನಡೆಸುತ್ತಿವೆ. ಶಬರಿಮಲೆಯ ಬುಡದಲ್ಲಿಯೇ ಮಹಿಳೆಯರನ್ನು ತಡೆಯಲಾಗುವುದು ಎಂದು ಕೆಲವು ಸಂಘಟನೆಗಳು ಹೇಳಿವೆ.

ಸುಪ್ರೀಂ ಕೋರ್ಟ್ ತೀರ್ಪನ್ನು ಹಿಡಿದುಕೊಂಡು ಕಾಂಗ್ರೆಸ್‌ ಮತ್ತು ಬಿಜೆಪಿ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿವೆ ಎಂದು ಸಿಪಿಎಂ ಆರೋಪಿಸಿದೆ.

ದೇವಸ್ಥಾನದ ಆಡಳಿತ ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಮಂಡಳಿಯು ಬಿಕ್ಕಟ್ಟಿನ ಬಗ್ಗೆ ಮಾತುಕತೆ ನಡೆಸಲು ಮಂಗಳವಾರ ಸಭೆ ಕರೆದಿದೆ. ಪಂದಳಂ ರಾಜ ಕುಟುಂಬದ ಪ್ರತಿನಿಧಿಗಳು, ದೇವಾಲಯದ ಪ್ರಧಾನ ಅರ್ಚಕರ ಕುಟುಂಬದ ಸದಸ್ಯರು ಮತ್ತು ಭಕ್ತರ ಗುಂಪುಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.