ತಿರುವನಂತಪುರ: ಸ್ವಾಮಿ ಅಯ್ಯಪ್ಪನ ಸನ್ನಿಧಿಗೆ ಅಕ್ಟೋಬರ್ 17ರಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಶಬರಿಮಲೆ ಕುರಿತಂತೆ ಇತ್ತೀಚೆಗೆ ಕೇಳಿ ಬರುತ್ತಿರುವ ವಿವಾದಗಳು ಅವರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಿರುವಾಂಕೂರು ದೇವಸ್ವ ಮಂಡಳಿ (ಟಿಡಿಬಿ) ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಶನಿವಾರ ಹೇಳಿದ್ದಾರೆ.
'ತುಲಾ' ಮಾಸದ ಪೂಜಾ ಕೈಂಕರ್ಯಗಳ ಸಲುವಾಗಿ ಶಬರಿಮಲೆ ದೇಗುಲವನ್ನು ಶುಕ್ರವಾರದಿಂದ ತೆರೆಯಲಾಗಿದೆ.
ದೇವಾಲಯದ ಆಡಳಿತ ಹಾಗೂ ಚಿನ್ನಾಭರಣ ವಿಚಾರ ಸೇರಿದಂತೆ ಇತರ ವಿವಾದಗಳು 'ಪ್ರತ್ಯೇಕವಾಗಿ ಸಾಗುತ್ತಿವೆ' ಎಂದು ಪ್ರಶಾಂತ್ ಹೇಳಿದ್ದಾರೆ.
'ಶುಕ್ರವಾರದಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದು, ಪುಣ್ಯಕ್ಷೇತ್ರ ಕುರಿತಾದ ವಿವಾದಗಳು ಅವರ ಮೇಲೆ ಯಾವುದೇ ಪರಿಣಾಮ ಉಂಟು ಮಾಡಿಲ್ಲ ಎಂಬುದನ್ನು ತೋರುತ್ತದೆ' ಎಂದು ಪ್ರತಿಪಾದಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿ ಹಿನ್ನೆಲೆಯಲ್ಲಿ, ದೇವಾಲಯದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿ ನಿಯೋಜನೆಯನ್ನು ಹೆಚ್ಚಿಸಲಾಗಿದೆ. ಮುರ್ಮು ಅವರ ಭೇಟಿ ಸಂದರ್ಭದಲ್ಲಿ ಭಕ್ತರ 'ದರ್ಶನ'ಕ್ಕೆ ನಿರ್ಬಂಧವಿದೆ ಎಂದು ಮಾಹಿತಿ ನೀಡಿದ್ದಾರೆ.
ಮುರ್ಮು ಅವರು ಅಕ್ಟೋಬರ್ 22ರಂದು ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ಸ್ವಾಮಿಯ ದರ್ಶನ ಪಡೆದು, ಬಳಿಕ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಅದೇ ದಿನ ಸಂಜೆ ತಿರುವನಂತಪುರಕ್ಕೆ ತೆರಳಲಿದ್ದಾರೆ ಎಂದೂ ತಿಳಿಸಿದ್ದಾರೆ.
ಮುರ್ಮು ಅವರು ನಾಲ್ಕು ದಿನಗಳ ಭೇಟಿ ಸಲುವಾಗಿ ಅಕ್ಟೋಬರ್ 21ರಂದು ಕೇರಳಕ್ಕೆ ಭೇಟಿ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.