ADVERTISEMENT

ಶಬರಿಮಲೆಗೆ ಮಹಿಳೆ: ಸರ್ವ ಪಕ್ಷ ಸಭೆ ಕರೆದ ಕೇರಳ ಸರ್ಕಾರ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 4:51 IST
Last Updated 14 ನವೆಂಬರ್ 2018, 4:51 IST
   

ತಿರುವನಂತಪುರಂ:ಶಬರಿಮಲೆ ದೇವಾಲಯದ ವಿಚಾರವಾಗಿ ಸದ್ಯ ತಲೆದೋರಿರುವ ಸಮಸ್ಯೆಗಳ ಕುರಿತು ಚರ್ಚಿಸಲು ನವೆಂಬರ್‌ 15ರಂದು ಸಭೆ ನಡೆಸಲು ಉದ್ದೇಶಿಸಿರುವ ಕೇರಳ ಸರ್ಕಾರ ಸರ್ವ ಪಕ್ಷಗಳನ್ನು ಆಹ್ವಾನಿಸಿದೆ.

ಎರಡು ತಿಂಗಳ ಅವಧಿಯ ವಾರ್ಷಿಕ ಯಾತ್ರಾ ಋತು‘ಮಂಡಲ ಮಕರವಿಲಕ್ಕು’ ನವೆಂಬರ್‌ 17ರಿಂದ ಆರಂಭವಾಗಲಿದ್ದು,ಭಕ್ತರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವ ಸಂಬಂಧವಾಗಿಯೂ ಸಭೆಯಲ್ಲಿ ಚರ್ಚಿಸಲಾಗುವುದು.

ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಪ್ರವೇಶ ಅವಕಾಶ ನೀಡುವಂತೆ ಸೆಪ್ಟೆಂಬರ್‌ 28ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಇದಾದ ಬಳಿಕ ರಾಜ್ಯದಾದ್ಯಂತ ಪ್ರತಿಭಟನೆಗಳು ಜರುಗಿದ್ದವು. ಈ ವೇಳೆ ಒಟ್ಟು 3,505 ಜನರನ್ನು ಬಂಧಿಸಿದ್ದ ಪೊಲೀಸರು, 529 ಜನರ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು .

ADVERTISEMENT

ಜೊತೆಗೆ ಸುಪ್ರೀಂ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ 49 ಪುನರ್‌ ಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿದ್ದವು.

‘ಮರುಪರಿಶೀಲನೆ ಕೋರಿರುವ ಎಲ್ಲ ಅರ್ಜಿಗಳನ್ನು 2019ರ ಜನವರಿ 22ರಂದು ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆಸಲಾಗುವುದು’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಸಂವಿಧಾನ ಪೀಠ ಹೇಳಿತು. ‘ಆದರೆ, ಸೆಪ್ಟೆಂಬರ್‌ 28ರ ತೀರ್ಪಿಗೆ ತಡೆ ನೀಡುವುದಿಲ್ಲ’ ಎಂದೂ ಸ್ಪಷ್ಟಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.