ADVERTISEMENT

ಶಬರಿಮಲೆಗೆ ಮಹಿಳೆ: ಮುಖ್ಯಮಂತ್ರಿ ವಿಜಯನ್ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ಆರಂಭ

ನವೆಂಬರ್‌ 17ರಿಂದ ‘ಮಂಡಲ ಮಕರವಿಲಕ್ಕು’ ವಾರ್ಷಿಕ ಯಾತ್ರಾ ಋತು ಪ್ರಾರಂಭವಾಗಲಿದೆ

ಏಜೆನ್ಸೀಸ್
Published 15 ನವೆಂಬರ್ 2018, 6:42 IST
Last Updated 15 ನವೆಂಬರ್ 2018, 6:42 IST
   

ತಿರುವನಂತಪುರಂ:ಶಬರಿಮಲೆ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್‌ ನೀಡಿದ್ದ ಆದೇಶದ ಬಳಿಕ, ರಾಜ್ಯದಲ್ಲಿ ಪ್ರತಿರೋಧ ವ್ಯಕ್ತವಾಗಿರುವ ಕುರಿತು ಚರ್ಚಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ ಆರಂಭವಾಗಿದೆ.

ಸುಪ್ರೀಂ ತೀರ್ಪಿನ ಸಂಬಂಧ ಒಮ್ಮತ ಮುಡಿಸುವ ಸಲುವಾಗಿ ಈ ಸಭೆ ಕರೆದಿರುವ ವಿಜಯನ್,ಪಂದಳಂ ರಾಜ ಕುಟುಂಬದ ಪ್ರತಿನಿಧಿಗಳು, ದೇವಾಲಯದ ಪ್ರಧಾನ ಅರ್ಚಕರ ಕುಟುಂಬದ ಸದಸ್ಯರು ಮತ್ತು ತಂತ್ರಿ ಕುಟುಂಬದ ಪ್ರತಿನಿಧಿಗಳೊಂದಿಗೂ ಮಾತುಕತೆ ನಡೆಸಲಿದ್ದಾರೆ.

ಸಭೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಹಾಜರಾಗಿದ್ದಾರೆ.

ADVERTISEMENT

ಎರಡು ತಿಂಗಳ ಅವಧಿಯ ವಾರ್ಷಿಕ ಯಾತ್ರಾ ಋತು‘ಮಂಡಲ ಮಕರವಿಲಕ್ಕು’ ನವೆಂಬರ್‌ 17ರಿಂದ ಆರಂಭವಾಗಲಿರುವುದರಿಂದ ಸಭೆಯು ಮಹತ್ವ ಪಡೆದುಕೊಂಡಿದೆ. ಭಕ್ತರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವುದು ಹಾಗೂ ಶಾಂತಿ ಸುವ್ಯವಸ್ಥೆ ನಿರ್ವಹಿಸುವ ಸಂಬಂಧವಾಗಿಯೂ ಚರ್ಚೆ ನಡೆಯಲಿದೆ.

ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಸಂಬಂಧಸೆಪ್ಟೆಂಬರ್‌ 28ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಇದಾದ ಬಳಿಕ ರಾಜ್ಯದಾದ್ಯಂತ ಪ್ರತಿಭಟನೆಗಳು ಜರುಗಿದ್ದವು. ಈ ವೇಳೆ ಒಟ್ಟು 3,505 ಜನರನ್ನು ಬಂಧಿಸಿದ್ದ ಪೊಲೀಸರು, 529 ಜನರ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.

ಸುಪ್ರೀಂ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ 49 ಪುನರ್‌ ಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿದ್ದು, ‘ಮರುಪರಿಶೀಲನೆ ಕೋರಿರುವ ಎಲ್ಲ ಅರ್ಜಿಗಳನ್ನು 2019ರ ಜನವರಿ 22ರಂದು ನ್ಯಾಯಾಲಯದಲ್ಲಿಯೇ ವಿಚಾರಣೆನಡೆಸಲಾಗುವುದು’ ಎಂದು ಹೇಳಿದ್ದ, ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಸಂವಿಧಾನಿಕ ಪೀಠ, ‘ಸೆಪ್ಟೆಂಬರ್‌ 28ರ ತೀರ್ಪಿಗೆ ತಡೆ ನೀಡುವುದಿಲ್ಲ’ ಎಂದೂ ಸ್ಪಷ್ಟಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.