
ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ನೀಡಿರುವ ಹೇಳಿಕೆಯನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಹಿಂಪಡೆಯಬೇಕು ಮತ್ತು ಕ್ಷಮೆಯಾಚಿಸಬೇಕು ಎಂದು ಸಚಿನ್ ಪೈಲಟ್ ಗುರುವಾರ ಆಗ್ರಹಿಸಿದ್ದಾರೆ.
ರಾಹುಲ್ ಅವರು ಭಾರತದ ಭದ್ರತೆಗೆ ‘ಅತ್ಯಂತ ಅಪಾಯಕಾರಿ ವ್ಯಕ್ತಿ’ ಎಂದು ರಿಜಿಜು ಅವರು ನೀಡಿದ್ದ ಹೇಳಿಕೆಗೆ ಪೈಲಟ್ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಪೈಲಟ್ ಅವರು, ‘ಪತ್ರಕರ್ತರು ಸರ್ಕಾರವನ್ನು ಟೀಕಿಸಿದಾಗ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ ಹಾಗೂ ಅವರನ್ನು ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಆದರೆ ಲೋಕಸಭೆಯ ವಿರೋಧ ಪಕ್ಷದ ನಾಯಕನ ವಿರುದ್ಧ ಹೇಳಿಕೆ ನೀಡುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ. ಇದು ಸರ್ಕಾರದ ಉದ್ದೇಶವನ್ನು ತೋರಿಸುತ್ತದೆ. ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುವುದು ಮತ್ತು ಸ್ಪಷ್ಟನೆ ಪಡೆದುಕೊಳ್ಳುವುದು ವಿಪಕ್ಷ ನಾಯಕನ ಕೆಲಸವಾಗಿದೆ’ ಎಂದು ಹೇಳಿದರು.
‘ವಿಪಕ್ಷ ನಾಯಕನ ಸ್ಥಾನವು ಸಾಂವಿಧಾನಿಕ ಹುದ್ದೆಯಾಗಿದೆ. ಅವರನ್ನು ಭದ್ರತೆಗೆ ಬೆದರಿಕೆ ಎಂದು ಟೀಕಿಸುವುದು ಅನುಚಿತ ಮತ್ತು ಅಗೌರವವನ್ನು ಸೂಚಿಸುತ್ತದೆ. ಅವರ ಮೇಲೆ ಈ ರೀತಿ ಬಹಿರಂಗವಾಗಿ ಬೆದರಿಕೆ ಹಾಕಲಾಗುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.