ಫಿರೋಜಾಬಾದ್ (ಪಿಟಿಐ): ‘ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೊದಲ ಎರಡು ಹಂತಗಳ ಮತದಾನದಲ್ಲಿ ಸಮಾಜವಾದಿ ಪಕ್ಷ (ಎಸ್ಪಿ) ಶತಕ ಬಾರಿಸಿದೆ. ನಾಲ್ಕನೇ ಹಂತದ ಮತದಾನ ಮುಗಿಯುವ ವೇಳೆಗೆ ಸರ್ಕಾರ ರಚಿಸುವಷ್ಟು ಸದಸ್ಯರ ಬಲ ನಮಗೆ ಇರುತ್ತದೆ’ ಎಂದು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಗುರುವಾರ ಹೇಳಿದ್ದಾರೆ.
ಫಿರೋಜಾಬಾದ್ನ ನಾಸಿರ್ಪುರ ಪ್ರದೇಶದಲ್ಲಿ ಚುನಾವಣಾ ರ್ಯಾಲಿ ನಡೆಸಿದ ಅವರು ಹೀಗೆ ಹೇಳಿದರು. ಪ್ರಜಾಪ್ರಭುತ್ವ ಉಳಿಸಲು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಉಳಿಸಲು, ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಘನತೆ ಉಳಿಸಲು ಈ ಚುನಾವಣೆ ನಡೆಯುತ್ತಿದೆ. ಈ ಬಾರಿ ಫಿರೋಜಾಬಾದ್ ಜನರು ಬಿಜೆಪಿಯ ಕಣ್ತೆರೆಸುತ್ತಾರೆ’ ಎಂದು ಹೇಳಿದರು.
ಎಸ್ಪಿ ಸರ್ಕಾರ ರಚಿಸಿದರೆ ಜಾತಿ ಗಣತಿ ನಡೆಸುವುದಾಗಿ, ಎಲ್ಲಾ ಜಾತಿಗಳಿಗೆ ಸಮಾನ ಪ್ರಾತಿನಿಧ್ಯ ಮತ್ತು ಮನ್ನಣೆ ನೀಡುವುದಾಗಿ ಅವರು ಭರವಸೆ ನೀಡಿದರು.
ಮೊದಲು ಭೂಗತ ಪಾತಕಿಯಾಗಿದ್ದು ಈಗ ರಾಜಕಾರಣಿಯಾಗಿ ಬದಲಾಗಿರುವ ವ್ಯಕ್ತಿಯೊಬ್ಬರು ಕ್ರಿಕೆಟ್ ಆಡುತ್ತಿದ್ದ ಚಿತ್ರವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಅ ಚಿತ್ರವನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ಮಾಫಿಯಾ ಡಾನ್ಗೆ ಕ್ರಿಕೆಟ್ ಆಡಲು ಅವಕಾಶ ನೀಡಿದವರು ಅಪರಾಧಿಗಳು’ ಎಂದರು.
ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ‘ಬಿಜೆಪಿ ನಾಯಕರ ಭಾಷಣಗಳನ್ನು ಕೇಳಿ. ಚಿಕ್ಕ ಮುಖಂಡರುಚಿಕ್ಕ ಸುಳ್ಳುಗಳನ್ನು ಹೇಳುತ್ತಿದ್ದಾರೆ. ದೊಡ್ಡ ನಾಯಕರು ದೊಡ್ಡ ಸುಳ್ಳುಗಳನ್ನು ಹೇಳುತ್ತಿದ್ದಾರೆ. ರೈತರ ಆದಾಯ ಹೆಚ್ಚಿಸುವ ಮತ್ತು ಯುವಕರಿಗೆ ಉದ್ಯೋಗ ಒದಗಿಸುವ ಭರವಸೆಯನ್ನು ಅವರು ಈಡೇರಿಸಿಲ್ಲ’ ಎಂದರು. ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಸೇರಿ ಎಲ್ಲವನ್ನೂ ಮೋದಿ ಸರ್ಕಾರವು ಮಾರಾಟ ಮಾಡುತ್ತಿದೆ. ಇದರಿಂದ ಉದ್ಯೋಗದಲ್ಲಿ ಮೀಸಲಾತಿ ಸಿಗುವುದಿಲ್ಲ ಎಂದರು.
ಮೊದಲ ಎರಡು ಹಂತಗಳ ಮತದಾನಲ್ಲಿ 113 ಕ್ಷೇತ್ರಗಳಿಗೆ ಮತದಾನ ನಡೆದಿದೆ.
ಯಾರೆಲ್ಲಾ ಕಾನೂನು ಉಲ್ಲಂಘಿಸುತ್ತಾರೊ ಅಥವಾ ಕಾನೂನಿನ ಪ್ರಕಾರ ಕೆಲಸ ಮಾಡುವುದಿಲ್ಲವೋ ಅವರು ಎಸ್ಪಿಗೆ ಮತ ನೀಡುವುದು ಬೇಡ
ಅಖಿಲೇಶ್ ಯಾದವ್, ಎಸ್ಪಿ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.