ADVERTISEMENT

ವ್ಯಾಪಾರ ಒಪ್ಪಂದದ ವಿರುದ್ಧ ಗ್ರಾಮಸಭೆ ನಡೆಸಿ: ಸಂಯುಕ್ತ ಕಿಸಾನ್ ಮೋರ್ಚಾ

ಪತ್ರ ಬರೆಯುವಂತೆ ದೇಶದ ರೈತರಿಗೆ ಮನವಿ ಮಾಡಿದ ಸಂಯುಕ್ತ ಕಿಸಾನ್ ಮೋರ್ಚಾ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 16:07 IST
Last Updated 22 ಫೆಬ್ರುವರಿ 2026, 16:07 IST
   

ನವದೆಹಲಿ: ಭಾರತ– ಅಮೆರಿಕ ನಡುವಿನ ಮಧ್ಯಂತರ ಒಪ್ಪಂದದ ವಿರುದ್ಧ ಗ್ರಾಮಗಳಲ್ಲಿ ಸಾರ್ವಜನಿಕ ಸಭೆ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾವು (ಎಸ್‌ಕೆಎಂ) ದೇಶದ ರೈತರಿಗೆ ಭಾನುವಾರ ಮನವಿ ಮಾಡಿದೆ.

ಸಂಸತ್‌ನ ಬಜೆಟ್‌ ಅಧಿವೇಶನ ಪುನರಾರಂಭಗೊಳ್ಳುವ ಮೊದಲು ಮಾರ್ಚ್‌ 9ರೊಳಗೆ ಹಳ್ಳಿಗಳಲ್ಲಿ ಸಭೆ ನಡೆಸಿ, ನಿರ್ಣಯವನ್ನು ಅಂಗೀಕರಿಸಿ ರಾಷ್ಟ್ರಪತಿಗೆ ಪತ್ರ ಬರೆಯುವಂತೆ 2020–21ರಲ್ಲಿ ರೈತರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘಟನೆಗಳ ಒಕ್ಕೂಟವಾದ ಎಸ್‌ಕೆಎಂ ತಿಳಿಸಿದೆ.

ರೈತರು ತಮ್ಮೂರುಗಳಲ್ಲಿ ಸಭೆ ನಡೆಸಿದ ಬಳಿಕ ಮೆರವಣಿಗೆ ಮೂಲಕ ಅಂಚೆ ಕಚೇರಿಗೆ ತೆರಳಿ ತಾವು ಬರೆದ ಬಹಿರಂಗ ಪತ್ರವನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಬೇಕು ಎಂದಿದೆ.

ADVERTISEMENT

ಪ್ರಧಾನಿಗೆ ನಿರ್ದೇಶನ ನೀಡಿ...

ಅಮೆರಿಕದ ಜೊತೆಗಿನ ವಾಣಿಜ್ಯ ಒಪ್ಪಂದವನ್ನು ಮುಂದುವರಿಸದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿರ್ದೇಶನ ನೀಡುವಂತೆ ಎಸ್‌ಕೆಎಂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದೆ.

ಬಹುರಾಷ್ಟ್ರೀಯ ಸಂಸ್ಥೆಗಳ ಲೂಟಿಗೆ ಕೃಷಿ ಕ್ಷೇತ್ರವನ್ನು ಮುಕ್ತಗೊಳಿಸಲು ಒಪ್ಪಿಕೊಂಡಿರುವುದಕ್ಕಾಗಿ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರನ್ನು ವಜಾಗೊಳಿಸುವಂತೆಯೂ ಆಗ್ರಹಿಸಿದೆ.

ಭಾರತ– ಅಮೆರಿಕ ನಡುವಿನ ಮಧ್ಯಂತರ ಒಪ್ಪಂದವು ‘ಸಾಮ್ರಾಜ್ಯಶಾಹಿ ಶಕ್ತಿಯ ಒತ್ತಡಗಳಿಗೆ ಬಲಿಯಾಗುವ ಪರಿಸ್ಥಿತಿಯನ್ನು ಸೃಷ್ಟಿಸಿದೆ. ದೇಶದ ಸ್ವಾವಲಂಬನೆ ಮತ್ತು ಸಾರ್ವಭೌಮತ್ವಕ್ಕೆ ಅಪಾಯವನ್ನುಂಟು ಮಾಡಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

‘ಟ್ರಂಪ್‌ ಘೋಷಣೆಯಂತೆ ಮಧ್ಯಂತರ ಒಪ್ಪಂದದಲ್ಲಿ ಅಂಗೀಕರಿಸಲ್ಪಟ್ಟಿರುವ ನಿಯಮಗಳು, ಭಾರತೀಯ ಆರ್ಥಿಕತೆ ಮತ್ತು ರೈತರ ಹಿತಾಸಕ್ತಿಗಳಿಗೆ ಹಾನಿಕಾರಕ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇದರ ಬಗ್ಗೆ ಕೇಂದ್ರ ಸರ್ಕಾರವು ಮೌನ ವಹಿಸಿರುವುದು ಕೆಟ್ಟದ್ದು’ ಎಂದು ದೂರಿದೆ.

ಭತ್ತ ಹಾಗೂ ಗೋಧಿ ಬೆಳೆಯುತ್ತಿರುವ ರೈತರಿಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ಕೊನೆಗೊಳಿಸುವಂತೆ ಕೇಂದ್ರ ಹಣಕಾಸು ಸಚಿವರು ರಾಜ್ಯ ಸರ್ಕಾರಗಳಿಗೆ ಕಳೆದ ಜನವರಿಯಲ್ಲಿ ಪತ್ರ ಬರೆದಿದ್ದು, ಈ ಪತ್ರವನ್ನು ವಾಪಸ್ ಪಡೆಯುವಂತೆ ನಿರ್ಮಲಾ ಸೀತಾರಾಮನ್ ಅವರಿಗೆ ಸೂಚಿಸಿ ಎಂದು ಎಸ್‌ಕೆಎಂ ತನ್ನ ಪತ್ರದಲ್ಲಿ ರಾಷ್ಟ್ರಪತಿಯವರನ್ನು ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.