ಲಖನೌ: ಉತ್ತರ ಪ್ರದೇಶದ ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿ ಆಪ್ತ ಸಂಜೀವ್ ಜೀವಾ ಎನ್ನುವರನ್ನು ಲಖನೌ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರ ವೇಷದಲ್ಲಿ ಬಂದಿದ್ದ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಈ ವೇಳೆ ಕೋರ್ಟ್ ಹಾಲ್ನಲ್ಲಿದ್ದ ಕೆಲ ಪೊಲೀಸರಿಗೂ ಗಾಯಗಳಾಗಿದ್ದು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಶ್ಚಿಮ ಉತ್ತರ ಪ್ರದೇಶದ ಗ್ಯಾಂಗ್ಸ್ಟರ್ ಆಗಿ ಗುರುತಿಸಿಕೊಂಡಿದ್ದ ಸಂಜೀವ್ ಜೀವಾ ಹಲವು ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸಿತ್ತಿದ್ದ.
1991ರ ಅವಧೇಶ್ ರಾಯ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಾಜಿ ಶಾಸಕ, ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿ ತಪ್ಪಿತಸ್ಥ ಎಂದು ವಾರಾಣಸಿಯ ಸಂಸದರು ಶಾಸಕರ ನ್ಯಾಯಾಲಯ ಇತ್ತೀಚೆಗಷ್ಟೇ ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿತ್ತು.
ಆಗಸ್ಟ್ 3, 1991ರಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಅಜಯ್ ರಾಯ್ ಅವರ ಸಹೋದರ ಅವಧೇಶ್ ರಾಯ್ ಅವರನ್ನು ವಾರಾಣಸಿಯ ಅಜಯ್ ರಾವ್ ಮನೆ ಎದುರೇ ಗುಂಡಿಕ್ಕಿ ಕೊಲ್ಲಲಾಗಿತ್ತು.
ತೀರ್ಪಿನ ಕುರಿತಂತೆ ಪ್ರತಿಕ್ರಿಯಿಸಿರುವ ಅಜಯ್ ರಾಯ್, ’ಹಲವು ವರ್ಷಗಳ ನಮ್ಮ ಕಾಯುವಿಕೆ ಕೊನೆಗೊಂಡಿದೆ. ನಾನು, ನನ್ನ ಪೋಷಕರು ಮತ್ತು ಅವಧೇಶ್ ಮಗಳು ಸೇರಿದಂತೆ ಕುಟುಂಬದ ಸದಸ್ಯರೆಲ್ಲ ತಾಳ್ಮೆಯಿಂದ ಕಾದೆವು. ಹಲವು ಸರ್ಕಾರಗಳು ಬಂದವು ಹೋದವು. ಮುಖ್ತಾರ್ ಬಲಿಷ್ಠವಾಗುತ್ತಲೇ ಹೋದರು. ಆದರೆ, ನಾವು ಕೈಚೆಲ್ಲಿ ಕೂರಲಿಲ್ಲ. ನಮ್ಮ ವಕೀಲರು ಪರಿಶ್ರಮದಿಂದ ನ್ಯಾಯಾಲಯದಲ್ಲಿ ಮುಖ್ತಾರ್ ತಪ್ಪಿತಸ್ಥನೆಂದು ಸಾಬೀತುಮಾಡಿದ್ದಾರೆ’ ಎಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.