ADVERTISEMENT

ನ್ಯಾ. ಬೋಪಣ್ಣ, ನ್ಯಾ. ಬೋಸ್‌ ಹೆಸರು ಮತ್ತೆ ಶಿಫಾರಸು

ಕೇಂದ್ರದ ಆಕ್ಷೇಪ ತಿರಸ್ಕರಿಸಿದ ’ಸುಪ್ರೀಂ‘ ಕೊಲಿಜಿಯಂ

ಪಿಟಿಐ
Published 9 ಮೇ 2019, 18:37 IST
Last Updated 9 ಮೇ 2019, 18:37 IST
   

ನವದೆಹಲಿ: ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ ಹಾಗೂ ಎ.ಎಸ್‌.ಬೋಪಣ್ಣ ಅವರಿಗೆ ಪದೋನ್ನತಿ ನೀಡುವಂತೆ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಮತ್ತೆ ಶಿಫಾರಸು ಮಾಡಿದೆ.

ಈ ಇಬ್ಬರು ನ್ಯಾಯಮೂರ್ತಿಗಳಿಗೆ ಪದನ್ನೋತಿ ನೀಡುವ ಸಂಬಂಧ ಕೇಂದ್ರ ಸರ್ಕಾರ ಎತ್ತಿದ್ದ ಆಕ್ಷೇಪವನ್ನು ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಕೊಲಿಜಿಯಂ ತಿರಸ್ಕರಿಸಿದ್ದು, ’ಉಭಯ ನ್ಯಾಯಮೂರ್ತಿಗಳ ಸಾಮರ್ಥ್ಯ, ನಡವಳಿಕೆ ಹಾಗೂ ಪ್ರಾಮಾಣಿಕತೆಗೆ ಕುಂದು ತರುವಂತಹ ಯಾವುದೇ ಅಂಶಗಳು ಕಂಡುಬಂದಿಲ್ಲ‘ ಎಂದು ಪ್ರತಿಪಾದಿಸಿದೆ.

ಪದೋನ್ನತಿ ನೀಡುವಂತೆ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಹಾಗೂ ಸೂರ್ಯಕಾಂತ ಅವರ ಹೆಸರನ್ನೂ ಶಿಫಾರಸು ಮಾಡಿರುವ ಕೊಲಿಜಿಯಂ,ಈ ಸಂಬಂಧ ತನ್ನ ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳನ್ನು ಸುಪ್ರೀಂಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ADVERTISEMENT

ಸೇವಾ ಜ್ಯೇಷ್ಠತೆ ಹಾಗೂ ಪ್ರಾದೇಶಿಕ ಪ್ರಾತಿನಿಧ್ಯದಂತಹ ಅಂಶಗಳನ್ನು ಪರಿಗಣಿಸಲಾಗಿಲ್ಲ ಎಂಬ ಕಾರಣ ನೀಡಿದ್ದ ಕೇಂದ್ರ ಸರ್ಕಾರ, ನ್ಯಾ.ಬೋಪಣ್ಣ ಹಾಗೂ ನ್ಯಾ. ಬೋಸ್‌ ಅವರ ಹೆಸರುಗಳನ್ನು ತಿರಸ್ಕರಿಸಿತ್ತು.

ಪ್ರಸ್ತುತ ಜಾರ್ಖಂಡ್ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಯಾಗಿರುವ ನ್ಯಾ.ಬೋಸ್‌ ಸೇವಾ ಜ್ಯೇಷ್ಠತೆಗೆ ಸಂಬಂಧಿಸಿದಂತೆ ಅಖಿಲ ಭಾರತ ಮಟ್ಟದಲ್ಲಿ 12ನೇ ಸ್ಥಾನದಲ್ಲಿದ್ದಾರೆ. 36ನೇ ಸ್ಥಾನದಲ್ಲಿರುವ ನ್ಯಾ.ಬೋಪಣ್ಣ ಈಗ ಗುವಾಹಟಿ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.