ನವದೆಹಲಿ: ‘ನಾಯಿ ಕಡಿತ ತಡೆಯುವ ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಾಲಯದ ಆವರಣದಲ್ಲಿ ತಿಂದು ಉಳಿದ ಆಹಾರವನ್ನು ಚೆಲ್ಲಬಾರದು’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸುತ್ತೋಲೆ ಹೊರಡಿಸಿದೆ.
ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್ಆರ್ಸಿ) ಇರುವ ಎಲ್ಲ ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಶಾಶ್ವತವಾಗಿ ಸ್ಥಳಾಂತರಿಸುವಂತೆ ನ್ಯಾಯಾಲಯವು ಸೋಮವಾರವಷ್ಟೇ ನಿರ್ದೇಶನ ನೀಡಿತ್ತು. ಈ ಕುರಿತು ಪ್ರಾಣಿಪ್ರಿಯರು, ಪ್ರಾಣಿ ಹಕ್ಕುಗಳ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
‘ನ್ಯಾಯಾಲಯದ ಆವರಣದಲ್ಲಿ ಬೀದಿ ನಾಯಿಗಳ ಓಡಾಟ ಭಾರಿ ಸಂಖ್ಯೆಯಲ್ಲಿ ಹೆಚ್ಚಳಗೊಂಡಿದೆ. ಲಿಫ್ಟ್ಗಳಲ್ಲಿಯೂ ನಾಯಿಗಳು ತಿರುಗಾಡುತ್ತಿವೆ. ಕೋರ್ಟ್ನ ಆವರಣದಲ್ಲಿ ಎಲ್ಲೆಂದರಲ್ಲಿ ಯಾವುದೇ ಕಾರಣಕ್ಕೂ ತಿಂದು ಉಳಿದ ತಿಂಡಿಗಳನ್ನು ಎಸೆಯುಬಾರದು. ಮುಚ್ಚಳ ಇರುವ ಕಸದ ಬುಟ್ಟಿಗಳಲ್ಲಿಯೇ ಕಸ ಹಾಕಬೇಕು. ಹೀಗೆ ಎಲ್ಲೆಂದರಲ್ಲಿ ಬಿಸಾಡಿದ ತಿಂಡಿಗಳನ್ನು ತಿನ್ನಲು ನಾಯಿಗಳು ಬರುತ್ತವೆ. ಇದನ್ನು ತಡೆಗಟ್ಟುವ ದೃಷ್ಟಿಯಿಂದ ಈ ನಿಯಮಗಳನ್ನು ಅನುಸರಿಸಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
‘ಒಂದೆಡೆ, ನಾಯಿ ಕಡಿತದಿಂದಲೂ ಬಚಾವಾಗಬಹುದು. ಇನ್ನೊಂದೆಡೆ, ಸ್ವಚ್ಛತೆಯನ್ನೂ ಕಾಪಾಡಿದಂತಾಗುತ್ತದೆ. ಎಲ್ಲರ ಸುರಕ್ಷತೆಗಾಗಿ ಈ ನಿಯಮಗಳನ್ನು ಪಾಲಿಸುವುದು ಅಗತ್ಯ ಮತ್ತು ಇದಕ್ಕೆ ಎಲ್ಲರ ಸಹಕಾರವೂ ಅಗತ್ಯ’ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.