ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಬಡ್ತಿ ನೀಡುವಲ್ಲಿ ಮೀಸಲಾತಿಯ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು 2019ರ ಏಪ್ರಿಲ್ 15ರಂದು ಅಂಗೀಕರಿಸಿದ ಆದೇಶದ ಕುರಿತು ಸ್ಪಷ್ಟೀಕರಣ ನೀಡುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
‘ನಾವು ಈಗಿನ ಯಥಾಸ್ಥಿತಿಗೆ ಅಡ್ಡಿಯಾಗುವುದಿಲ್ಲ. ನ್ಯಾಯದ ಹಿತದೃಷ್ಟಿಯಿಂದ ನಾಲ್ಕು ವಾರಗಳ ನಂತರ ಅಂತಿಮವಾಗಿ ನಾವು ಇದರ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಎ. ಬೊಬಡೆ, ನ್ಯಾಯಮೂರ್ತಿ ಎಲ್.ನಾಗೇಶ್ವರರಾವ್ ಅವರನ್ನೊಳಗೊಂಡ ನ್ಯಾಯಪೀಠವು, ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರಿಗೆಮೌಖಿಕವಾಗಿ ತಿಳಿಸಿತು.
ಸಾಮಾನ್ಯ ವರ್ಗದ ನೌಕರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ರಾಜೀವ್ ಧವನ್ ಮತ್ತು ವಕೀಲ ಕುಮಾರ್ ಪರಿಮಳ್ ಅವರು, ಈ ವಿಷಯದಲ್ಲಿ ಮಧ್ಯಂತರ ಆದೇಶವನ್ನು ಜಾರಿಗೊಳಿಸಬೇಕೆಂಬ ಮನವಿಗೆ ವಿರೋಧ ವ್ಯಕ್ತಪಡಿಸಿದರು. ವರ್ಚುವಲ್ ನ್ಯಾಯಾಲಯದ ಬದಲಿಗೆ ಭೌತಿಕ ನ್ಯಾಯಾಲಯದಲ್ಲಿ ಈ ವಿಷಯವನ್ನು ಆಲಿಸಬೇಕು ಎಂದೂ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಏಳು ನ್ಯಾಯಾಧೀಶರ ಸಮಿತಿಯು ಭೌತಿಕ ನ್ಯಾಯಾಲಯಗಳ ಪುನರಾರಂಭದ ಬಗ್ಗೆ ಪರಿಗಣಿಸಿದ್ದು, ಇನ್ನು ನಾಲ್ಕು ವಾರಗಳೊಳಗೆ ಈ ಸಮಸ್ಯೆಯನ್ನು ಪರಿಹರಿಸಲಾಗುವುದು. ಆದ್ದರಿಂದ ಎಲ್ಲಾ ತ್ವರಿತ ವಿಷಯಗಳ ಪ್ರಕರಣಗಳನ್ನು ನಾಲ್ಕು ವಾರಗಳ ಬಳಿಕ ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.