ADVERTISEMENT

ಮೀಸಲು ಪಟ್ಟಿ ಬದಲಿಸುವ ಹಕ್ಕು ರಾಜ್ಯಕ್ಕಿಲ್ಲ: ಕೇಂದ್ರ

ಯೋಗಿ ಸರ್ಕಾರಕ್ಕೆ ಚಾಟಿ ಬೀಸಿದ ಕೇಂದ್ರ

ಪಿಟಿಐ
Published 2 ಜುಲೈ 2019, 20:15 IST
Last Updated 2 ಜುಲೈ 2019, 20:15 IST
   

ನವದೆಹಲಿ: ಇತರ ಹಿಂದುಳಿದ ವರ್ಗಕ್ಕೆ(ಒಬಿಸಿ) ಸೇರಿದ 17 ಸಮುದಾಯಗಳನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರ ಸರಿಯಲ್ಲ. ಮೀಸಲು ಪಟ್ಟಿಯನ್ನು ಬದಲಾಯಿಸುವ ಹಕ್ಕು ಸಂಸತ್ತಿಗಷ್ಟೇ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಉತ್ತರಪ್ರದೇಶ ಸರ್ಕಾರದ ಆದೇಶ ಸಂವಿಧಾನ ಬದ್ಧವಾಗಿಲ್ಲ. ಹೀಗಾಗಿ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಬಾರದು. ಒಂದು ವೇಳೆ ಪ್ರಮಾಣ ಪತ್ರ ವಿತರಿಸಿದರೆ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಬಹುದು. ಹಾಗಾದಲ್ಲಿ ಯಾರಿಗೂ ಯಾವ ಸೌಕರ್ಯ ಸಿಗುವುದಿಲ್ಲ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ ಚಂದ್‌ ಗೆಹ್ಲೋಟ್‌ ರಾಜ್ಯಸಭೆಯಲ್ಲಿ ಮಂಗಳವಾರ ಹೇಳಿದರು.

ಬಿಎಸ್‌ಪಿ ಸದಸ್ಯ ಸತೀಶ್‌ಚಂದ್ರ ಮಿಶ್ರಾ ಶೂನ್ಯವೇಳೆಯಲ್ಲಿ ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಉತ್ತರ ಪ್ರದೇಶ ಸರ್ಕಾರವು ಮೀಸಲು ಪಟ್ಟಿಯಲ್ಲಿ ಬದಲಾವಣೆ ಮಾಡಲು ಉದ್ದೇಶಿಸಿದರೆ, ಆ ಕುರಿತ ಪ್ರಸ್ತಾವವನ್ನು ಕೇಂದ್ರಕ್ಕೆ ಕಳುಹಿಸಬೇಕು. ಆಗ ಕೇಂದ್ರವು ಅದನ್ನು ಪರಿಗಣಿಸಬಹುದು. ಜಾತಿಯನ್ನು ಒಂದು ಪಟ್ಟಿಯಿಂದ ಇನ್ನೊಂದು ಪಟ್ಟಿಗೆ ವರ್ಗಾಯಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ ಎಂದರು.

ADVERTISEMENT

2005ರಲ್ಲಿ ಮುಲಾಯಂ ಸಿಂಗ್‌ ನೇತೃತ್ವದ ಸರ್ಕಾರವು11 ಸಮುದಾಯಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸುವಂತೆ ಆದೇಶ ನೀಡಿತ್ತು. ಆದರೆ ಆದೇಶಕ್ಕೆ ತಡೆಯಾಜ್ಞೆ ಬಂದಿದ್ದು, ಕೊನೆಗೆ ಪ್ರಸ್ತಾವವನ್ನು ಕೇಂದ್ರಕ್ಕೆ ಕಳುಹಿಸಲಾಗಿತ್ತು. ಬಳಿಕ ಮಾಯಾವತಿ ಸರ್ಕಾರ ಈ ಆದೇಶವನ್ನು ರದ್ದುಪಡಿಸಿತ್ತು. ಅಖಿಲೇಶ್‌ ಯಾದವ್‌ ನೇತೃತ್ವದ ಸರ್ಕಾರವು ಮತ್ತೆ ಆದೇಶ ಮಾಡಿದ್ದಾಗ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.