ADVERTISEMENT

ನಾಯಕರಿಗೆ ಶಿಕ್ಷೆ: ಸುಪ್ರೀಂ ಕೋರ್ಟ್‌ಗೆ ತೃಪ್ತಿ

ಪಿಟಿಐ
Published 16 ಏಪ್ರಿಲ್ 2019, 20:15 IST
Last Updated 16 ಏಪ್ರಿಲ್ 2019, 20:15 IST
   

ನವದೆಹಲಿ: ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬಿಎಸ್‌ಪಿ ನಾಯಕಿ ಮಾಯಾವತಿ ಮುಂತಾದ ನಾಯಕರ ವಿರುದ್ಧ ಚುನಾವಣಾ ಆಯೋಗ ಕೈಗೊಂಡಿರುವ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ತೃಪ್ತಿ ವ್ಯಕ್ತಪಡಿಸಿದೆ.

ಜೊತೆಗೆ, ಚುನಾವಣಾ ಆಯೋಗವು ತಮಗೆ ‘ಪ್ರಚಾರ ನಿಷೇಧ ಶಿಕ್ಷೆ’ ನೀಡಿರುವುದನ್ನು ಪ್ರಶ್ನಿಸಿ ಮಾಯಾವತಿ ಅವರು ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಲು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠ ನಿರಾಕರಿಸಿದೆ. ಆಯೋಗದ ಆದೇಶದ ವಿರುದ್ಧ ಪ್ರತ್ಯೇಕ ದೂರು ದಾಖಲಿಸುವಂತೆ ಮಾಯಾವತಿ ಅವರ ವಕೀಲರಿಗೆ ಕೋರ್ಟ್‌ ಸೂಚಿಸಿದೆ.

ಪ್ರಚಾರ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬಿಎಸ್‌ಪಿ ನಾಯಕಿ ಮಾಯಾವತಿ, ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಮೇನಕಾ ಗಾಂಧಿ ಹಾಗೂ ಎಸ್‌ಪಿ ನಾಯಕ ಆಜಂ ಖಾನ್‌ ಅವರಿಗೆ ಚುನಾವಣಾ ಆಯೋಗವು ಹಲವು ಗಂಟೆಗಳ ಪ್ರಚಾರ ನಿಷೇಧ ಶಿಕ್ಷೆ ವಿಧಿಸಿತ್ತು.

ADVERTISEMENT

ಆಯೋಗವು ನಾಲ್ವರು ನಾಯಕರಿಗೆ ಶಿಕ್ಷೆ ನೀಡಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ ಕೋರ್ಟ್‌, ‘ಚುನಾವಣಾ ಆಯೋಗಕ್ಕೆ ಮತ್ತೆ ಶಕ್ತಿ ಬಂದಿರುವಂತೆ ಕಾಣಿಸುತ್ತದೆ. ನೀವು ನಿದ್ದೆಯಿಂದ ಎದ್ದು ಕ್ರಮ ಕೈಗೊಳ್ಳಲು ಆರಂಭಿಸಿದ್ದೀರಿ. ಆದ್ದರಿಂದ ಬೇರೆ ಯಾವುದೇ ಆದೇಶ ನೀಡುವ ಅಗತ್ಯ ಕಾಣಿಸುತ್ತಿಲ್ಲ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.