ನವದೆಹಲಿ: ‘ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ)’ ವೇದಿಕೆ ಮುಖಾಂತರ ಪಡೆದ ದತ್ತಾಂಶವನ್ನು ಮಾತೃ ಕಂಪನಿ ಅಥವಾ ಇತರರ ಜೊತೆ ಹಂಚಿಕೊಳ್ಳಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಹಾಗೂ ಎನ್ಪಿಸಿಐಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಾಟ್ಸ್ಆ್ಯಪ್ ಸಂಸ್ಥೆಯಿಂದ ಸೋಮವಾರ ಪ್ರತಿಕ್ರಿಯೆ ಕೇಳಿದೆ.
‘ವಾಟ್ಸ್ಆ್ಯಪ್ ಪ್ರತಿಕ್ರಿಯೆಯನ್ನು ಸಲ್ಲಿಸದೇ ಹೋದರೆ, ರಾಜ್ಯಸಭೆ ಸದಸ್ಯ ಬಿನಾಯ್ ವಿಸ್ವಂ ಅವರು ಸಲ್ಲಿಸಿರುವ ಅರ್ಜಿಯಲ್ಲಿರುವ ಸಮರ್ಥನೆಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳಲಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ವಿ.ರಾಮಸುಬ್ರಮಣಿಯನ್ ಅವರಿದ್ದ ಪೀಠವು ಹೇಳಿತು.
ಯುಪಿಐ ವೇದಿಕೆ ಮುಖಾಂತರ ಪಡೆದ ದತ್ತಾಂಶವನ್ನು ದುರುಪಯೋಗಪಡಿಸಿಕೊಳ್ಳಬಾರದು ಹಾಗೂ ಇದನ್ನು ಪಾವತಿ ಹೊರತುಪಡಿಸಿ ಇತರೆ ಉದ್ದೇಶಗಳಿಗೆ ಬಳಸಬಾರದು ಎಂದು ಕೋರಿರುವ ಹಲವು ವಿಚಾರಣಾವಧಿಯ ಅರ್ಜಿಗಳನ್ನು ಈ ಅರ್ಜಿ ಜೊತೆ ದಾಖಲಿಸಲಾಗಿದೆ. ‘ವಾಟ್ಸ್ಆ್ಯಪ್ ಪೇ ಅಗತ್ಯವಿರುವ ಎಲ್ಲ ಅನುಮತಿಗಳನ್ನು ಪಡೆದಿದೆ’ ಎಂದು ವಿಚಾರಣೆ ಸಂದರ್ಭದಲ್ಲಿ ವಾಟ್ಸ್ಆ್ಯಪ್ ಪರ ವಾದಿಸಿದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಹೇಳಿದರು.
ವಾಟ್ಸ್ಆ್ಯಪ್ ನೂತನ ನೀತಿಯ ಕುರಿತ ಅರ್ಜಿ ವಿಚಾರಣೆಯ ಜೊತೆ ಈ ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದ ಪೀಠವು, ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿತು. ಇದೇ ಸಂದರ್ಭದಲ್ಲಿ ಇಸ್ರೆಲ್ನ ಸ್ಪೈವೇರ್ ಪೆಗಸಸ್ ಕುರಿತು ಅಫಿಡವಿಟ್ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಪೀಠವು ನಿರ್ದೇಶಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.