ADVERTISEMENT

ರಾಮ ಸೇತು ರಾಷ್ಟ್ರೀಯ ಸ್ಮಾರಕವಾಗಿ ಘೋಷಣೆ ಕೇಸ್: ಇದೇ 26ರಂದು ‘ಸುಪ್ರೀಂ’ ವಿಚಾರಣೆ

ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕೇಂದ್ರಕ್ಕೆ ನಿರ್ದೇಶನ ಕೋರಿ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿದ ಅರ್ಜಿ

ಪಿಟಿಐ
Published 13 ಜುಲೈ 2022, 10:44 IST
Last Updated 13 ಜುಲೈ 2022, 10:44 IST
ರಾಮಸೇತು (ಉಪಗ್ರಹ ಚಿತ್ರ)
ರಾಮಸೇತು (ಉಪಗ್ರಹ ಚಿತ್ರ)   

ನವದೆಹಲಿ: ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಇದೇ 26ರಂದು ನಡೆಸಲು ಸುಪ್ರೀಂಕೋರ್ಟ್‌ ಬುಧವಾರ ಸಮ್ಮತಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಹಾಗೂ ಹಿಮಾ ಕೊಯ್ಲಿ ಅವರಿದ್ದ ಪೀಠಕ್ಕೆ ಸ್ವಾಮಿ ಅವರು ‘ಇದೊಂದು ಸಣ್ಣ ವಿಷಯ. ತುರ್ತು ವಿಚಾರಣೆ ನಡೆಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು ‘ಇದನ್ನು ನನ್ನ ನಿವೃತ್ತಿಯ ನಂತರ ವಿಚಾರಣೆಗೆ ಪಟ್ಟಿ ಮಾಡೋಣ’ ಎಂದು ಸ್ವಾಮಿ ಅವರಿಗೆ ಹೇಳಿದಾಗ, ಕ್ಷಣ ಕಾಲ ನಗೆಯ ವಾತಾವರಣ ಮೂಡಿತು. ನಂತರಮುಖ್ಯ ನ್ಯಾಯಮೂರ್ತಿಗಳು ಈ ಅರ್ಜಿಯನ್ನು ಇದೇ 26ರಂದು ವಿಚಾರಣೆ ನಡೆಸಲು ಪಟ್ಟಿ ಮಾಡಲು ಸೂಚಿಸಿದರು.

ADVERTISEMENT

ತಮಿಳುನಾಡಿನ ರಾಮೇಶ್ವರಂ ಅಥವಾ ಪಂಬನ್ ದ್ವೀಪದಿಂದ ಶ್ರೀಲಂಕಾದ ವಾಯವ್ಯ ಕರಾವಳಿಯ ಮನ್ನಾರ್ ದ್ವೀಪಕ್ಕೆ ಸಂಪರ್ಕಿಸುವ ಸುಣ್ಣ ಕಲ್ಲಿನ ಸೇತುವೆಯೇ ರಾಮ ಸೇತು ಎನ್ನಲಾಗುತ್ತದೆ. ಇದಕ್ಕೆ ಆ್ಯಡಮ್‌ನ ಸೇತುವೆ ಎನ್ನುವ ಇನ್ನೊಂದು ಹೆಸರೂ ಇದೆ.

ಯುಪಿಎ–1ರ ಸರ್ಕಾರದ ಅವಧಿಯಲ್ಲಿನ ವಿವಾದಿತ ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯ ವಿರುದ್ಧ ಸುಬ್ರಮಣಿಯನ್‌ ಸ್ವಾಮಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ರಾಮ ಸೇತು ರಕ್ಷಿಸಿ, ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಬೇಕೆಂದು ‘ಸುಪ್ರೀಂ’ ಮೆಟ್ಟಿಲು ಏರಿದ್ದಾರೆ.

ಕೇಂದ್ರ ಸರ್ಕಾರ ರಾಮ ಸೇತು ಅಸ್ತಿತ್ವ ಒಪ್ಪಿರುವುದರಿಂದ ಮೊದಲ ಸುತ್ತಿನ ಕಾನೂನು ಸಮರದಲ್ಲಿ ಜಯ ಸಿಕ್ಕಿದೆ ಎಂದು ಸ್ವಾಮಿ ಈ ಹಿಂದೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.