ನವದೆಹಲಿ: ಸಾರ್ವತ್ರಿಕ ಚುನಾವಣೆಯ ವರ್ಷದಲ್ಲಿ ಚುನಾವಣಾ ಬಾಂಡ್ ಮಾರಾಟವನ್ನು 15 ದಿನ ವಿಸ್ತರಿಸಿರುವ ಅಧಿಸೂಚನೆಯನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕರಾದ ಜಯಾ ಠಾಕುರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಡಿ.6ಕ್ಕೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಜೆ.ಬಿ. ಪಾರ್ದಿವಾಲಾ ಅವರಿದ್ದ ಪೀಠ, ಜಯಾ ಠಾಕೂರ್ ಅವರ ಅರ್ಜಿ ಹಾಗೂ ಚುನಾವಣಾ ಬಾಂಡ್ಗೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳನ್ನು ಡಿ.6ಕ್ಕೆ ನಡೆಸುವುದಾಗಿ ಹೇಳಿದೆ.
ಇತ್ತೀಚೆಗೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗ ಸಭೆಗಳಿಗೆ ಸಾರ್ವತ್ರಿಕ ಚುನಾವಣೆಯ ವರ್ಷದಲ್ಲಿ ಚುನಾವಣಾ ಬಾಂಡ್ಗಳ ಮಾರಾಟಕ್ಕೆ 15 ದಿನಗಳ ಹೆಚ್ಚುವರಿ ಅವಧಿ ನೀಡಲು 2018 ರ ಚುನಾವಣಾ ಬಾಂಡ್ ಯೋಜನೆಗೆ ತಿದ್ದುಪಡಿ ಮಾಡಿ ಕೇಂದ್ರವು ಹೊಸ ಅಧಿಸೂಚನೆಯನ್ನು ಹೊರಡಿಸಿತ್ತು, ಇದನ್ನು ಪ್ರಶ್ನಿಸಿ ಜಯಾ ಅರ್ಜಿ ಸಲ್ಲಿಸಿದ್ದರು.
ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯನ್ನು ತರುವ ಸಲುವಾಗಿ 2018ರ ಜ.2 ರಂದು ಸರ್ಕಾರ ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೆ ತಂದಿತ್ತು. ಯೋಜನೆಯ ಅನ್ವಯ ಭಾರತದ ನಾಗರಿಕ ಅಥವಾ ಭಾರತದ ಸಂಘಟಿತ ಅಥವಾ ಸ್ಥಾಪಿಸಲಾದ ಸಂಸ್ಥೆಯಿಂದ ಚುನಾವಣಾ ಬಾಂಡ್ ಖರೀದಿಸಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.