ADVERTISEMENT

ಶಾಲಾ ದಾಖಲಾತಿಗೆ ಜಾತಿ, ಧರ್ಮದ ಪ್ರಮಾಣ ಪತ್ರ ಒತ್ತಾಯ: ತನಿಖೆಗೆ ಆದೇಶ

ತನಿಖೆಗೆ ಶಿಕ್ಷಣ ಇಲಾಖೆ ಆದೇಶ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 21:24 IST
Last Updated 21 ಫೆಬ್ರುವರಿ 2020, 21:24 IST

ತಿರುವನಂತಪುರ: ಮೊದಲನೇ ತರಗತಿಗೆ ದಾಖಲಾಗಲು ಮಗುವಿನ ಜಾತಿ ಮತ್ತು ಧರ್ಮದ ಪ್ರಮಾಣ ಪತ್ರ ನೀಡುವಂತೆ ಅನುದಾನಿತ ಶಾಲೆಯೊಂದು ದಂಪತಿಗೆ ಒತ್ತಾಯಿಸಿದೆ. ಈ ಪ್ರಕರಣದ ಕುರಿತು ಕೇರಳ ಶಿಕ್ಷಣ ಇಲಾಖೆ ತನಿಖೆ ಕೈಗೊಂಡಿದೆ.

ತಿರುವನಂತಪುರ ನಗರದ ಪಟ್ಟೋಮ್‌ನ ಸಂತ ಮೇರಿ ಶಾಲೆಯಲ್ಲಿ ಈ ಪ್ರಕರಣ ನಡೆದಿದೆ.

ನಜೀಮ್‌ ಮತ್ತು ಧನ್ಯಾ ಎನ್ನುವ ದಂಪತಿ ತಮ್ಮ ಮಗುವನ್ನು ಒಂದನೇ ತರಗತಿಗೆ ಸೇರಿಸುವ ಸಂದರ್ಭದಲ್ಲಿ ಪ್ರವೇಶದ ಅರ್ಜಿಯ ಜತೆ ಜಾತಿ ಮತ್ತು ಧರ್ಮದ ಪ್ರಮಾಣಪತ್ರ ನೀಡುವಂತೆ ಶಾಲೆಯ ಆಡಳಿತ ಮಂಡಳಿ ಒತ್ತಾಯಿದೆ. ದಂಪತಿ ಆಕ್ಷೇಪ ವ್ಯಕ್ತಪಡಿಸಿದಾಗ, ಯಾವುದೇ ಸರ್ಕಾರಿ ಶಾಲೆಗೆ ಮಗುವನ್ನು ದಾಖಲಿಸುವಾಗಲೂ ಜಾತಿ ಮತ್ತು ಧರ್ಮದ ಪ್ರಮಾಣ ಪತ್ರ ಕಡ್ಡಾಯ ಎಂದು ಹೇಳಿದ್ದಾರೆ.

ADVERTISEMENT

ಈ ವಿಷಯ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಮಗುವಿನ ಪ್ರಮಾಣ ಪತ್ರ ನೀಡದಿದ್ದರೂ ಶಾಲೆಯಲ್ಲಿ ಪ್ರವೇಶ ಕಲ್ಪಿಸುವುದಾಗಿ ಆಡಳಿತ ಮಂಡಳಿ ಒಪ್ಪಿಕೊಂಡಿತು. ಆದರೆ, ಮಗನ ಭವಿಷ್ಯದ ದೃಷ್ಟಿಯಿಂದ ಈ ಶಾಲೆಗೆ ಸೇರಿಸುವುದಿಲ್ಲ ಎಂದು ದಂಪತಿ ತಿಳಿಸಿದ್ದಾರೆ.

‘ಜಾತಿ ಮತ್ತು ಧರ್ಮದ ಆಧಾರದಲ್ಲಿ ಮಕ್ಕಳಿಗಾಗಿ ಹಲವು ಸರ್ಕಾರದ ಯೋಜನೆಗಳಿವೆ. ಇದು ಮಕ್ಕಳಿಗೆ ಸಿಗಲಿ ಎನ್ನುವ ದೃಷ್ಟಿಯಿಂದ ಮಾತ್ರ ನಾವು ಪ್ರಮಾಣ ಪತ್ರ ಕೇಳಿದ್ದೇವೆ’ ಎಂದು ಶಾಲೆಯ ಸಾರ್ವಜನಿಕಸಂಪರ್ಕ ಅಧಿಕಾರಿ ಬೋವಸ್‌ ಮ್ಯಾಥೀವ್‌ ಮೆಲೂಟ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.