ADVERTISEMENT

‘ಚಕ್ಕಾ ಜಾಮ್‌‘ ಪ್ರತಿಭಟನೆ; ದೆಹಲಿ ನಗರ, ಗಡಿಯಲ್ಲಿ ಬಿಗಿ ಭದ್ರತೆ,

ಹೆಚ್ಚುವರಿ ಪಡೆಗಳ ನಿಯೋಜನೆ, ಡ್ರೋಣ್‌ ಮೂಲಕ ತೀವ್ರ ನಿಗಾ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 7:12 IST
Last Updated 6 ಫೆಬ್ರುವರಿ 2021, 7:12 IST
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಶನಿವಾರ ರೈತ ಸಂಘಟನೆಗಳು ಕರೆ ನೀಡಿರುವ ‘ಚಕ್ಕಾ ಜಾಮ್‘ ರಸ್ತೆ ತಡೆ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿ–ಉತ್ತರ ಪ್ರದೇಶದ ಗಡಿಭಾಗ ಗಾಜಿಪುರದಲ್ಲಿ ಅರೆಸೇನಾ ಪಡೆ ಯೋಧರು ರಸ್ತೆಗೆ ಬ್ಯಾರಿಕೆಡ್ ಹಾಕಿರುವ ದೃಶ್ಯ
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಶನಿವಾರ ರೈತ ಸಂಘಟನೆಗಳು ಕರೆ ನೀಡಿರುವ ‘ಚಕ್ಕಾ ಜಾಮ್‘ ರಸ್ತೆ ತಡೆ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿ–ಉತ್ತರ ಪ್ರದೇಶದ ಗಡಿಭಾಗ ಗಾಜಿಪುರದಲ್ಲಿ ಅರೆಸೇನಾ ಪಡೆ ಯೋಧರು ರಸ್ತೆಗೆ ಬ್ಯಾರಿಕೆಡ್ ಹಾಕಿರುವ ದೃಶ್ಯ   

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಒಕ್ಕೂಟ ಶನಿವಾರ ಮೂರು ಗಂಟೆಗಳ ಕಾಲ ದೇಶದಾದ್ಯಂತ ‘ಚಕ್ಕಾ ಜಾಮ್‌‘ ರಸ್ತೆ ತಡೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ದೆಹಲಿ ಗಡಿ ಭಾಗಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದು, ಹೆಚ್ಚುವರಿಯಾಗಿ ಸಾವಿರಾರು ಅರೆ ಸೇನಾಪಡೆಯ ಯೋಧರನ್ನು ನಿಯೋಜಿಸಿದ್ದಾರೆ.

ವಿವಿಧ ರೈತ ಸಂಘಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರು, ‘ನಾವು ಚಕ್ಕಾ ಜಾಮ್‌ ಪ್ರತಿಭಟನೆಯ ಭಾಗವಾಗಿ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಖಂಡದಲ್ಲಿ ರಸ್ತೆಗಳನ್ನು ಬಂದ್ ಮಾಡುವುದಿಲ್ಲ‘ ಎಂದು ಹೇಳಿದ್ದಾರೆ. ಆದರೆ, ದೇಶದ ವಿವಿಧ ಭಾಗಗಳಲ್ಲಿ ರೈತರು ರಾಷ್ಟ್ರ ಮತ್ತು ರಾಜ್ಯ ಹೆದ್ದಾರಿಗಳನ್ನು ಮೂರು ಗಂಟೆಗಳ ಕಾಲ ಬಂದ್‌ ಮಾಡಿ, ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಶುಕ್ರವಾರ ತಿಳಿಸಿದ್ದರು.

ಗಣರಾಜ್ಯೋತ್ಸವದ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರ ಮತ್ತು ಇಂದು ರೈತರು ಕರೆ ನೀಡಿರುವ ಈ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಪೊಲೀಸರು ದೆಹಲಿ ನಗರದ ಪ್ರಮುಖ ಸ್ಥಳಗಳು ಮತ್ತು ಗಡಿ ಭಾಗಗಳಲ್ಲಿನ ಪ್ರತಿಭಟನಾ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ಭದ್ರತೆ ಬಿಗಿಗೊಳಿಸಿದ್ದಾರೆ.

ADVERTISEMENT

ಟ್ರ್ಯಾಕ್ಟರ್‌ ರ್‍ಯಾಲಿ ವೇಳೆ ಹಿಂಸಾಚಾರ ಸಂಭವಿಸಿದ ದೆಹಲಿ ಕೆಂಪುಕೋಟೆ ಮತ್ತು ಐಟಿಒ ಬಳಿ ಭದ್ರತೆ ಹೆಚ್ಚಿಸಿದ್ದಾರೆ. ಪೊಲೀಸರು ಪ್ರತಿಭಟನಾ ಸ್ಥಳಗಳಲ್ಲಿ ಡ್ರೋನ್ ಕ್ಯಾಮೆರಾ ಬಳಸಿ, ಪ್ರತಿಭಟನಾಕಾರರ ಮೇಲೆ ನಿಗಾ ಇಟ್ಟಿದ್ದಾರೆ.

ಪ್ರತಿಭಟನಾ ಸ್ಥಳಗಳ ಸುತ್ತ ಮುನ್ನೆಚ್ಚರಿಕೆಯಾಗಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದ್ದು, ಸುಳ್ಳು ಸುದ್ದಿ ಹಬ್ಬದಂತೆ ಎಚ್ಚರ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.