ಮುಂಬೈ (ಪಿಟಿಐ): ಸಮಯ ಮೀರುವ ಮೊದಲೇ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಶಿವಸೇನಾ ಶಾಸಕ ಪ್ರತಾಪ್ ಸರ್ನಾಯಕ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಶಾಸಕ ಸರ್ನಾಯಕ್ ಅವರು ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ. ‘ಬಿಜೆಪಿಯೊಂದಿಗೆ ಮೈತ್ರಿ ಕಡಿದು ಹೋಗಿದ್ದರು ಸಹ, ಎರಡೂ ಪಕ್ಷಗಳ ಮುಖಂಡ ನಡುವೆ ಸೌಹಾರ್ದ ಸಂಬಂಧ ಇದೆ. ಹೀಗಾಗಿ, ಸಮಯ ಕಳೆದು ಹೋಗುವ ಮುನ್ನವೇ ಬಿಜೆಪಿಯೊಂದಿಗೆ ಹೊಂದಾಣಿಕೆಗೆ ಮುಂದಾಗಬೇಕು’ ಎಂದು ಮನವಿ ಮಾಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಸರ್ನಾಯಕ್ ಅವರಿಗೆ ಸೇರಿದ ಕಚೇರಿ, ನಿವಾಸಗಳ ಮೇಲೆ ಕಳೆದ ವರ್ಷ ನವೆಂಬರ್ನಲ್ಲಿ ದಾಳಿ ನಡೆಸಿದ್ದರು. ತನಿಖೆಯೂ ನಡೆಯುತ್ತಿದೆ.
‘ಕರ್ಣ ಅಥವಾ ಅಭಿಮನ್ಯುವಿನ ರೀತಿ ಬಲಿದಾನಕ್ಕಿಂತ, ಅರ್ಜುನನ ರೀತಿ ಯದ್ಧ ಮಾಡಬೇಕು ಎಂಬ ಮಾತಿನಲ್ಲಿ ನನಗೆ ನಂಬಿಕೆ ಇದೆ. ಇದೇ ಕಾರಣಕ್ಕೆ, ನನಗೆ ಪಕ್ಷದ ಮುಖಂಡರ ಅಥವಾ ಸರ್ಕಾರದ ಬೆಂಬಲ ಇಲ್ಲದಿದ್ದರೂ ನಾನು ಕಳೆದ ಏಳು ತಿಂಗಳಿನಿಂದ ಕಾನೂನು ಹೋರಾಟ ಮಾಡುತ್ತಿದ್ದೇನೆ’ ಎಂದೂ ಅವರು ಪತ್ರದಲ್ಲಿ ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.