ADVERTISEMENT

ಸಂಸತ್‌ನಲ್ಲಿ ಮುಂದುವರಿದ ಪ್ರತಿಭಟನೆ: ಕಾಂಗ್ರೆಸ್‌ನ 7 ಸಂಸದರ ಅಮಾನತು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 16:05 IST
Last Updated 5 ಮಾರ್ಚ್ 2020, 16:05 IST
   

ನವದೆಹಲಿ: ಪ್ರತಿಭಟನೆಯ ನೆಪದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿ ಅಶಿಸ್ತಿನಿಂದ ನಡೆದುಕೊಂಡ ಕಾಂಗ್ರೆಸ್‌ನ ಏಳು ಲೋಕಸಭಾ ಸದಸ್ಯರನ್ನು ಸದನದಿಂದ ಅಮಾನತು ಮಾಡಲಾಗಿದೆ.

ಅಶಿಸ್ತಿನ ಕಾರಣ ನಿಯಮ 374ರ ಅಡಿ ಕ್ರಮ ಕೈಗೊಳ್ಳಲಾಗಿದ್ದು, ಇವರು ಬಜೆಟ್‌ ಅಧಿವೇಶನದ ಬಾಕಿ ಅವಧಿಗೆ ಸದನಕ್ಕೆ ಹಾಜರಾಗುವಂತಿಲ್ಲ.

ಎನ್‌ಡಿಎ ಭಾಗವಾದ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಹನುಮಾನ್‌ ಬೇಣಿವಾಲ್‌ ಅವರು ಕೋವಿಡ್‌–19 ನಿಯಂತ್ರಣದ ಕುರಿತ ಚರ್ಚೆಯ ವೇಳೆ ನೀಡಿದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಸದಸ್ಯರು, ಸ್ಪೀಕರ್‌ ಪೀಠ ಬಳಿಗೆ ತೆರಳಿ ಘೋಷಣೆ ಕೂಗಿ, ಕಾಗದ ಹರಿದು ಹಾಕಿದ್ದರಿಂದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ADVERTISEMENT

ಕೋವಿಡ್‌–19 ಸೋಂಕು ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ಆರೋಗ್ಯ ಸಚಿವ ಹರ್ಷವರ್ಧನ್‌ ವಿವರ ನೀಡಿದ ನಂತರ ನಡೆದ ಚರ್ಚೆಯಲ್ಲಿ ಬೇಣಿವಾಲ್‌, ದೇಶದಲ್ಲಿ ಸೋಂಕು ಕಂಡುಬಂದಿರುವ ಬಹುತೇಕರು ಇಟಲಿಯಿಂದ ಬಂದವರಾಗಿದ್ದಾರೆ. ಇತ್ತೀಚೆಗೆ ಅಲ್ಲಿಂದ ಮರಳಿರುವ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂದ ಕೂಡಲೇ ವಿರೋಧ ಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸದರು.

ಕಾಂಗ್ರೆಸ್‌ ಖಂಡನೆ:ಅಮಾನತು ಆದೇಶವನ್ನು ಖಂಡಿಸಿರುವ ಲೋಕಸಭೆಯ ಕಾಂಗ್ರೆಸ್‌ ಗುಂಪಿನ ನಾಯಕ ಅಧೀರ್‌ ರಂಜನ್‌ ಚೌಧರಿ, ‘ಇದು ಸ್ಪೀಕರ್‌ ನಿರ್ಧಾರವಲ್ಲ. ಬದಲಿಗೆ, ಕೇಂದ್ರ ಸರ್ಕಾರದ ನಿರ್ಧಾರ. ಈ ಕ್ರಮದಿಂದ ಹಿಂಜರಿಯದೆ ಹೋರಾಟ ಮುಂದುವರಿಸುತ್ತೇವೆ’ ಎಂದು ಹೇಳಿದ್ದಾರೆ.

ಗೊಗೊಯ್‌ ಸದಸ್ಯತ್ವ ರದ್ದತಿಗೆ ದೂರು
ನವದೆಹಲಿ:
ಅಸ್ಸಾಂನ ಕಾಲಿಯಾಬೋರ್‌ ಕ್ಷೇತ್ರದ ಸಂಸದ, ಕಾಂಗ್ರೆಸ್‌ನ ಗೌರವ್‌ ಗೊಗೊಯ್ ಸದನದಲ್ಲಿ ಪದೇಪದೇ ಅಶಿಸ್ತು ಪ್ರದರ್ಶಿಸುತ್ತಿದ್ದು, ಅವರ ಲೋಕಸಭೆಯ ಸದಸ್ಯತ್ವ ರದ್ದುಪಡಿಸುವಂತೆ ಕೋರಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

ಈ ಕುರಿತು ಸಂಸದೀಯ ಶಿಸ್ತು ಸಮಿತಿಯು ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದೆ. ಶೀಘ್ರವೇ ಆದೇಶ ಹೊರಬೀಳಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.