ADVERTISEMENT

ಎನ್‌ಸಿಬಿ ಕಚೇರಿಗೆ ಶಾರುಕ್‌ ಖಾನ್ ಮ್ಯಾನೇಜರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 20:54 IST
Last Updated 23 ಅಕ್ಟೋಬರ್ 2021, 20:54 IST

ಮುಂಬೈ (ಪಿಟಿಐ): ಬಾಲಿವುಡ್‌ ನಟ ಶಾರುಕ್ ಖಾನ್‌ ಅವರ ವ್ಯವಸ್ಥಾಪಕಿ ಪೂಜಾ ದದ್ಲಾನಿ, ಎನ್‌ಸಿಬಿ ಕಚೇರಿಗೆ ಶನಿವಾರ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಪೂಜಾ ಅವರು ಲಕೋಟೆ ಹಿಡಿದು ಬೆಳಿಗ್ಗೆ ಸುಮಾರು 10 ಗಂಟೆಗೆ ಕಚೇರಿ ಒಳಗೆ ಹೋದರು. ಸುಮಾರು ಒಂದು ಗಂಟೆ ಬಳಿಕ ಕಚೇರಿಯಿಂದ ಹೊರಬಂದ ಅವರ ಪ್ರತಿಕ್ರಿಯೆ ಪಡೆಯಲು ಸುದ್ದಿಗಾರರು ಪ್ರಯತ್ನಿಸಿದರು. ಆದರೆ, ಅವರು ಏನನ್ನೂ ಮಾತನಾಡದೇ ಅಲ್ಲಿಂದ ಹೊರಟರು ಎನ್ನಲಾಗಿದೆ.

ಶುಕ್ರವಾರವಷ್ಟೇ ಶಾರುಕ್‌ ಖಾನ್‌ ಅಂಗರಕ್ಷಕ ಎನ್‌ಸಿಬಿ ಕಚೇರಿಗೆ ತೆರಳಿ ಕೆಲವು ದಾಖಲೆಗಳಿದ್ದ ಮೊಹರು ಮಾಡಿರುವ ಲಕೋಟೆಯನ್ನು ಹಸ್ತಾಂತರಿಸಿದ್ದರು.

ADVERTISEMENT

ತಪ್ಪಾಗಿ ಅರ್ಥೈಸಲಾಗುತ್ತಿದೆ: ಹಡಗಿನಲ್ಲಿ ವಶಪಡಿಸಿಕೊಂಡ ಮಾದಕದ್ರವ್ಯದ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು, ನಾನು ಈ ಹಿಂದೆ ಮಾಡಿದ್ದ ವಾಟ್ಸ್‌ಆ್ಯಪ್‌ ಸಂದೇಶಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ’ ಎಂದು ಆರ್ಯನ್‌ ಖಾನ್‌ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ. ತನಿಖಾ ಅಧಿಕಾರಿಗಳು ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಅರ್ಥೈಸಿರುವ ರೀತಿ ಸರಿಯಲ್ಲ ಮತ್ತು ನ್ಯಾಯ
ಬದ್ಧವಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಸಾಕ್ಷ್ಯ ಇಲ್ಲದಿದ್ದಲ್ಲಿ ಮಲಿಕ್‌ ಆರೋಪಿಸುತ್ತಿರಲಿಲ್ಲ (ಥಾಣೆ): ‘ಎನ್‌ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ವಿರುದ್ಧ ನವಾಬ್‌ ಮಲಿಕ್‌ ಅವರಿಗೆ ಪ್ರಮುಖ ಸಾಕ್ಷ್ಯಗಳು ದೊರಕಿ
ರಬಹುದು. ಅದಿಲ್ಲದೇ ಅವರು ವಾಂಖೆಡೆ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರಲಿಲ್ಲ’ ಎಂದು ಮಹಾರಾಷ್ಟ್ರ ಎನ್‌ಸಿಪಿ ಘಟಕದ ಮುಖ್ಯಸ್ಥ ಮತ್ತು ರಾಜ್ಯ ಸಚಿವ ಜಯಂತ್‌ ಪಾಟೀಲ್‌ ಹೇಳಿದ್ದಾರೆ. ಸದ್ಯದಲ್ಲೇ ಈ ಕುರಿತು ಸ್ಪಷ್ಟ ಚಿತ್ರಣ ದೊರಕಲಿದೆ ಎಂದಿದ್ದಾರೆ.

ಎನ್‌ಸಿಬಿ ಅಧಿಕಾರಿಗಳು ನಡೆಸಿದ ದಾಳಿ ಬಗ್ಗೆ ಮೊದಲಿನಿಂದಲೂ ಮಲಿಕ್‌ ಟೀಕೆ ನಡೆಸುತ್ತಿದ್ದಾರೆ. ‘ವಾಂಖೆಡೆ ಒಬ್ಬ ನಕಲಿ ಅಧಿಕಾರಿ. ಅವರ ವಿರುದ್ಧದ ಸಾಕ್ಷ್ಯಗಳು ಬಹಿರಂಗವಾದರೆ ಅವರು ಸರ್ಕಾರಿ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ’ ಎಂದು ಇತ್ತೀಚೆಗೆ ಮಲಿಕ್‌ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.