ಮುಂಬೈ: ‘ವಿರೋಧಪಕ್ಷಗಳೆಲ್ಲ ಸೇರಿ ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ’ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಆದರೆ, ಆಡಳಿತಾರೂಢ ಎನ್ಡಿಎಯನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕಾಗಿ ಬಿಜೆಪಿಯೇತರ ಪಕ್ಷಗಳನ್ನೆಲ್ಲ ಒಂದೇ ವೇದಿಕೆಗೆ ತರಲು ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ.
‘ಸದ್ಯ ವಿರೋಧಪಕ್ಷದಲ್ಲಿರುವ ಯಾವುದೇ ಪಾರ್ಟಿಯು ಮುಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಿಸಿದರೆ ಆ ಪಕ್ಷವು ಪ್ರಧಾನಿ ಹುದ್ದೆಗೆ ಬೇಡಿಕೆ ಇಡಬಹುದು’ ಎಂದು ಅವರು ಹೇಳಿದ್ದಾರೆ.
‘ಮುಂದಿನ ವಿಧಾನಸಭಾ ಚುನಾವಣೆ ನಂತರ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾಗಲಿದೆ’ ಎಂದು ಅವರು ಹೇಳಿದರು.
‘2004ರಲ್ಲಿ ದೇಶದಲ್ಲಿದ್ದ ಪರಿಸ್ಥಿತಿಯೇ ಈಗಲೂ ಇದೆ. ಆಗ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರದಲ್ಲಿತ್ತು. ಈಗ ಮೋದಿಯವರನ್ನು ಇಷ್ಟಪಡುವುದಕ್ಕಿಂತಲೂ ಹೆಚ್ಚಾಗಿ ದೇಶ ಆಗ ವಾಜಪೇಯಿಯವರನ್ನು ಇಷ್ಟಪಡುತ್ತಿತ್ತು. ಆದರೂ, ಸರ್ಕಾರವನ್ನು ಜನ ಬದಲಿಸಿದರು’ ಎಂದು ಅವರು ನೆನಪಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.