ಮುಂಬೈ: ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ಅಫಿಡವಿಟ್ಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಎನ್ಸಿಪಿ ವರಿಷ್ಠ ಶರದ್ ಪವಾರ್ ಅವರಿಗೆ ಮಂಗಳವಾರ ನೋಟಿಸ್ ನೀಡಿದೆ.
‘ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್ನಲ್ಲಿನ ಮಾಹಿತಿಗೆ ಸಂಬಂಧಿಸಿ ಕೆಲವು ಸ್ಪಷ್ಟೀಕರಣ ಹಾಗೂ ವಿವರಣೆ ನೀಡುವಂತೆ ಸೂಚಿಸಿ ಆದಾಯ ತೆರಿಗೆ ಇಲಾಖೆ ನನಗೆ ನೋಟಿಸ್ ನೀಡಿದೆ‘ ಎಂದು ಪವಾರ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ನನಗೆ ನಿನ್ನೆ ನೋಟಿಸ್ ತಲುಪಿದೆ. ಎಲ್ಲ ಸಂಸದರ ಪೈಕಿ ನಮ್ಮ ಬಗ್ಗೆ ಅವರಿಗೆ (ಕೇಂದ್ರಕ್ಕೆ) ಬಹಳ ಪ್ರೀತಿ ಎಂಬುದು ತಿಳಿದು ಸಂತೋಷವಾಗಿದೆ’ ಎಂದ ಅವರು, ‘ಚುನಾವಣಾ ಆಯೋಗದ ನಿರ್ದೇಶನದಂತೆ ಐಟಿ ಇಲಾಖೆ ಈ ನೋಟಿಸ್ ನೀಡಿದ್ದು, ಇದಕ್ಕೆ ಉತ್ತರ ನೀಡುತ್ತೇವೆ’ ಎಂದು ಹೇಳಿದರು.
ಅವರ ಪುತ್ರಿ ಹಾಗೂ ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ,ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಪರಿಸರ ಸಚಿವ ಆದಿತ್ಯ ಠಾಕ್ರೆ ಅವರಿಗೂ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪವಾರ್ ಈ ರೀತಿ ಉತ್ತರಿಸಿದರು.
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗುತ್ತದೆ ಎಂಬ ವರದಿಗಳ ಬಗ್ಗೆಯೂ ಪವಾರ್ ಪ್ರಸ್ತಾಪಿಸಿದರು. ‘ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಏನಾದರೂ ಕಾರಣಗಳಿವೆಯೇ? ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವುದು ತಮಾಷೆಯ ವಿಷಯವೇ’ ಎಂದು ಪ್ರಶ್ನಿಸಿದ ಅವರು, ‘ಆಡಳಿತಾರೂಢ ಮಹಾ ವಿಕಾಸ್ ಆಘಾಡಿಗೆ ಸರಳ ಬಹುಮತ ಇದ್ದು, ಅವಧಿ ಪೂರ್ಣಗೊಳಿಸುವುದು‘ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.