ಚೆನ್ನೈ: ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತೆ, ವಿ.ಕೆ. ಶಶಿಕಲಾ ಅವರ ಕುಟುಂಬಕ್ಕೆ ಸೇರಿದ ಎರಡು ಐಶಾರಾಮಿ ಬಂಗಲೆಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಆದಾಯ ತೆರಿಗೆ ಇಲಾಖೆಯ ಬೇನಾಮಿ ಆಸ್ತಿ ತಡೆ ಘಟಕವು ಆರಂಭಿಸಿದೆ.
ನೀಲಗಿರಿಯ ಪ್ರದೇಶ, ನಗರದ ಹೊರವಲಯದಲ್ಲಿರುವ ಸುಮಾರು ₹2,000 ಕೋಟಿ ಮೌಲ್ಯದ ಈ ಬಂಗಲೆಗಳನ್ನು ವಶಪಡಿಸುವುದಕ್ಕೆ ಸಂಬಂಧಿಸಿದಂತೆ ಇಲಾಖೆಯು ಶಶಿಕಲಾ ಹಾಗೂ ಅವರ ಸಂಬಂಧಿಗಳಾದ ಇಳವರಸಿ, ಜಯಲಲಿತಾ ಅವರ ದತ್ತುಪುತ್ರ ವಿ.ಎನ್. ಸುಧಾಕರನ್ ಅವರಿಗೆ ನೋಟಿಸ್ ನೀಡಿದೆ. ‘1988ರ ಬೇನಾಮಿ ಆಸ್ತಿ ವಹಿವಾಟು ಕಾಯ್ದೆಯ ಸೆಕ್ಷನ್ 24(3)ರ ಅಡಿಯಲ್ಲಿ ಈ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ’ ಎಂದು ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತ ಯು.ಎನ್. ದಿಲೀಪ್ ಹೇಳಿದ್ದಾರೆ. ಜಯಲಲಿತಾ ಅವರ ಉತ್ತರಾಧಿಕಾರಿಗಳೆಂದು ಮೆಡ್ರಾಸ್ ಹೈಕೋರ್ಟ್ ಘೋಷಿಸಿರುವ ಜೆ. ದೀಪಾ ಹಾಗೂ ಜೆ. ದೀಪಕ್ ಅವರಿಗೂ ನೋಟಿಸ್ ಜಾರಿ ಮಾಡಿರುವುದು ವಿಶೇಷವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.