ADVERTISEMENT

ಮಹಿಳೆಯರನ್ನು ಬೆತ್ತಲೆಗೊಳಿಸಿದ್ದು ಸ್ಮೃತಿಯನ್ನು ಕೆರಳಿಸಿಲ್ಲ: ಮಾಲಿವಾಲ್

ಪಿಟಿಐ
Published 10 ಆಗಸ್ಟ್ 2023, 16:35 IST
Last Updated 10 ಆಗಸ್ಟ್ 2023, 16:35 IST
   

ನವದೆಹಲಿ: ‘ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಪ್ರಕರಣವು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರಲ್ಲಿ ಆಕ್ರೋಶವನ್ನು ಕೆರಳಿಸುವುದಿಲ್ಲ’ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ (ಡಿಸಿಡಬ್ಲ್ಯು) ಸ್ವಾತಿ ಮಾಲಿವಾಲ್‌ ಅವರು ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸದನದಲ್ಲಿ ಸಂಸದೆಯರತ್ತ ‘ಫ್ಲೈಯಿಂಗ್‌ ಕಿಸ್‌’ ನೀಡಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸ್ಮೃತಿ ಇರಾನಿ ಅವರು ಆರೋಪ ಮಾಡಿರುವ ಬೆನ್ನಲ್ಲೇ ಸ್ವಾತಿ ಅವರು ಎಕ್ಸ್‌ನಲ್ಲಿ (ಟ್ವಿಟರ್) ಎರಡು ನಿಮಿಷದ ವಿಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ. ಮಹಿಳೆಯರ ವಿರುದ್ಧ ದೇಶದಲ್ಲಿ ನಡೆದ ಹಲವು ಘಟನೆಗಳ ಕುರಿತು ಸ್ಮೃತಿ ಅವರು ಮೌನ ಕಾಯ್ದುಕೊಂಡಿರುವ ಕುರಿತು ಅವರು ಪ್ರಶ್ನಿಸಿದ್ದಾರೆ.

‘ಕೇಂದ್ರ ಸಚಿವೆಯು ಆಕ್ರೋಶಕ್ಕೊಳಗಾಗಿದ್ದಾರೆ. ಸಂಸತ್ತಿನಲ್ಲಿ ಅವರ ಹಿಂದಿನ ಆಸನದಲ್ಲಿ ಬ್ರಿಜ್‌ಭೂಷಣ್‌ ಎಂಬ ವ್ಯಕ್ತಿ ಕೂರುವಾಗ ಈ ಆಕ್ರೋಶ ಎಲ್ಲಿ ಹೋಗುತ್ತದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಮಹಿಳಾ ಅಥ್ಲೀಟ್‌ಗಳನ್ನು ಕೋಣೆಗೆ ಕರೆದ ಮತ್ತು ಅವರನ್ನು ಅನುಚಿತವಾಗಿ ಸ್ಪರ್ಶಿಸಿದ ಆರೋಪವನ್ನು ಬ್ರಿಜ್‌ಭೂಷಣ್‌ ಹೊಂದಿದ್ದಾರೆ ಎಂದು ಹೇಳಿದ್ದಾರೆ.‌

ADVERTISEMENT

ಗುಜರಾತ್‌ನ ಬಿಲ್ಕಿಸ್‌ ಬಾನು ಅತ್ಯಾಚಾರಿಗಳನ್ನು ಸ್ವಾತಂತ್ರ್ಯ ದಿನದಂದೇ ಬಿಡುಗಡೆಗೊಳಿಸಿದ್ದಾಗಲೀ ಅಥವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 20 ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಛಾ ಸೌದಾ ಮುಖ್ಯಸ್ಥ ಗುರುಮೀತ್‌ ರಾಮ್ ರಹೀಮ್‌ ಸಿಂಗ್‌ಗೆ ಹರಿಯಾಣ ಸರ್ಕಾರವು ಮೇಲಿಂದ ಮೇಲೆ ಪರೋಲ್‌ ನೀಡಿ ಬಿಡುಗಡೆ ಮಾಡುತ್ತಿರುವುದಾಗಲೇ ಸ್ಮೃತಿ ಅವರು ಕೆರಳಿಸುವುದಿಲ್ಲ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.