ಮುಂಬೈ: ಕೊರೊನಾ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಮಹಾರಾಷ್ಟ್ರದಾದ್ಯಂತ ದೇವಾಲಯಗಳನ್ನು ತೆರೆಯಬೇಕೆಂಬ ಬಿಜೆಪಿ ಆಗ್ರಹಕ್ಕೆ ತಿರುಗೇಟು ನೀಡಿರುವ ಆಡಳಿತಾರೂಢ ಶಿವಸೇನಾ ಪಕ್ಷ, ’ಇದರಿಂದಾಗುವ ಪರಿಣಾಮಗಳ ಹೊಣೆಯನ್ನು ಬಿಜೆಪಿ ಹೊತ್ತುಕೊಳ್ಳಲು ಸಿದ್ಧವಿದೆಯೇ’ ಎಂದು ಪ್ರಶ್ನಿಸಿದೆ.
’ದೇವಾಲಯಗಳನ್ನು ತೆರೆಯಲು ಅನುಮತಿ ನೀಡಿ, ಅದರಿಂದ ಕೊರೊನಾ ಸೋಂಕು ಪ್ರಕರಣಗಳು ಉಲ್ಬಣಗೊಂಡು, ನಂತರ ಉಂಟಾಗುವ ಪರಿಣಾಮಗಳ ಹೊಣೆಯನ್ನು ಬಿಜೆಪಿ ಹೊರುತ್ತದೆಯೇ’ ಎಂದು ಶಿವಸೇನಾ ಪ್ರಶ್ನಿಸಿದೆ.
ವಿರೋಧಪಕ್ಷ ಬಿಜೆಪಿ, ಕಳೆದ ವಾರ ಮಹಾರಾಷ್ಟ್ರದಾದ್ಯಂತ ದೇವಾಲಯಗಳನ್ನು ತೆರೆಯಬೇಕೆಂದು ಒತ್ತಾಯಿಸಿ, ದೇವಾಲಯಗಳ ಎದುರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ವಿರೋಧಪಕ್ಷದ ನಾಯಕ ದೇವೇಂದ್ರ ಫಡ್ನವಿಸ್, ’ದೇವಾಲಯಕ್ಕೆ ಹೋಗುವ ಜನರಿಗೆ ಹೇಗೆ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕೆಂಬ ಅರಿವಿದೆ’ ಎಂದು ಹೇಳಿದ್ದರು.
’ದೇವಸ್ಥಾನ ತೆರೆಯಬೇಕೆಂಬ ಬಿಜೆಪಿಯವರ ಹೋರಾಟ, ರಾಜಕೀಯವೋ ಅಥವಾ ಧಾರ್ಮಿಕವೋ ತಿಳಿಯುತ್ತಿಲ್ಲ’ ಎಂದು ಶಿವಸೇನಾ ವ್ಯಂಗ್ಯವಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.