ಮುಂಬೈ: ಪ್ರಧಾನಿ ನರೇಂದ್ರ ಮೋದಿ 21 ದಿನಗಳಲ್ಲಿ ಕೊರೊನಾ ವಿರುದ್ಧ ಜಯ ಸಾಧಿಸುತ್ತೇವೆ ಅಂತ ವಿಶ್ವಾಸದಿಂದ ಹೇಳಿದ್ದರು. ಆದರೆ 100 ದಿನಗಳಾದರೂ ಕೊರೊನಾ ಬಿಕ್ಕಟ್ಟು ಮುಂದುವರಿದಿದೆ ಎಂದು ಶಿವಸೇನಾ ಟೀಕಿಸಿದೆ.
‘ಕೊರೊನಾ ವಿರುದ್ಧದ ಹೋರಾಟ ಮಹಾಭಾರತದ ಧರ್ಮಯುದ್ಧಕ್ಕಿಂತ ಕಠಿಣವಾಗಿದೆ’ಎಂದುಪಕ್ಷದ ಮುಖವಾಣಿಯಾಗಿರುವ ‘ಸಾಮ್ನಾʼ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.
‘ಆರ್ಥಿಕ ಮಹಾಶಕ್ತಿಯಾಗಿ ಹೊರಹೊಮ್ಮುವ ಕನಸು ಕಾಣುತ್ತಿರುವ ದೇಶ ಇದೀಗ ಅತಿ ಹೆಚ್ಚು ಸೋಂಕಿತರನ್ನು ಒಳಗೊಂಡ ಮೂರನೇ ದೇಶವಾಗಿದೆ. ಭಾರತಕ್ಕೆ ಇಂತಹಪರಿಸ್ಥಿತಿ ಎದುರಾಗಿರುವುದು ನಿಜಕ್ಕೂ ವಿಷಾದನೀಯ. ನಾವು ರಷ್ಯಾವನ್ನೂ ಹಿಂದಿಕ್ಕಿ ಮೂರನೇ ಸ್ಥಾನದಲ್ಲಿದ್ದೇವೆ. ಮುಂದೆ ಪರಿಸ್ಥಿತಿ ಹದಗೆಟ್ಟರೆ ಕೊರೊನಾ ಬಾಧಿತ ದೇಶಗಳ ಪಟ್ಟಿಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿ ಬರಬಹುದು’ ಎಂದು ಹೇಳಲಾಗಿದೆ.
‘ಕೊರೊನಾ ಲಸಿಕೆ 2021ಕ್ಕಿಂತ ಮುನ್ನ ಸಿದ್ಧವಾಗುವುದಿಲ್ಲ. ಹಾಗಾಗಿ ಕೊರೊನಾದೊಂದಿಗೆ ಬದುಕುವುದನ್ನು ನಾವು ಕಲಿತುಕೊಳ್ಳಬೇಕು. ಎಷ್ಟು ದಿನ ಲಾಕ್ಡೌನ್ ಹೇರಲು ಸಾಧ್ಯ. ಲಾಕ್ಡೌನ್ ನಿಯಮ ಸಡಿಲಗೊಳಿಸಿದರೆ ಸೋಂಕಿನ ಭೀತಿ ಮನೆ ಕದ ತಟ್ಟುತ್ತಿರುತ್ತದೆ. ರಾಜಕಾರಣಿ, ಆರೋಗ್ಯ ಸಿಬ್ಬಂದಿ, ಪೊಲೀಸರು, ಅಧಿಕಾರಿಗಳಿಗೂ ಸೋಂಕು ತಗುಲಿದೆ’ ಎಂದು ಶಿವಸೇನಾ ಆತಂಕ ವ್ಯಕ್ತಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.