ಇಟಾವ, ಉತ್ತರ ಪ್ರದೇಶ: ಶಿವಪಾಲ್ ಸಿಂಗ್ ಯಾದವ್ ತಾವು ಸ್ಥಾಪಿಸಿರುವ ಪ್ರಗತಿಶೀಲ್ ಸಮಾಜವಾದಿ ಪಾರ್ಟಿ–ಲೋಹಿಯಾ (ಪಿಎಸ್ಪಿಎಲ್) ವನ್ನು ಸಮಾಜವಾದಿ ಪಾರ್ಟಿಯಲ್ಲಿ (ಎಸ್ಪಿ) ವಿಲೀನಗೊಳಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ವಿಲೀನದ ಬಗ್ಗೆ ಅಕ್ಟೋಬರ್ 11ರೊಳಗೆ ನಿರ್ಧಾರ ಪ್ರಕಟಿಸುವಂತೆ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಮಂಗಳವಾರ ಗಡುವು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಸ್ಪಿ ಜೊತೆ ಮೈತ್ರಿಗೆ ಅಥವಾ ಆ ಪಕ್ಷದಲ್ಲಿ ಪಿಎಸ್ಪಿಎಲ್ ಅನ್ನು ವಿಲೀನಗೊಳಿಸಲು ಸಿದ್ಧನಿದ್ದೇನೆ’ ಎಂದರು. ‘ಈ ಗಡುವಿನೊಳಗೆ ಅಖಿಲೇಶ್ ಯಾದವ್ ತನ್ನ ನಿರ್ಧಾರ ತಿಳಿಸದಿದ್ದರೆ, ಎಲ್ಲ 403 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ಆರಂಭಿಸುವೆ’ ಎಂದರು.
‘ಎರಡೂ ಪಕ್ಷಗಳು ಹಾಗೂ ರಾಜ್ಯದ ಜನರ ಹಿತದೃಷ್ಟಿಯಿಂದ ಉಭಯ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಬೇಕು. ರಾಜ್ಯದಲ್ಲಿ ಮತ್ತೆ ಎಸ್ಪಿಯನ್ನು ಅಧಿಕಾರಕ್ಕೆ ತರುವ ಸಲುವಾಗಿ ನಾನು ನೇತಾಜಿ (ಅಣ್ಣ ಮುಲಾಯಂ ಸಿಂಗ್ ಯಾದವ್) ಮಾರ್ಗದರ್ಶನದಲ್ಲಿ ದುಡಿಯಲು ಸಿದ್ಧನಿದ್ದೇನೆ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.