ನವದೆಹಲಿ: ‘ಪಕ್ಷ ಬದಲಿಸಿದ ನಂತರ ಜ್ಯೋತಿರಾದಿತ್ಯ ಸಿಂಧಿಯಾ ಅವರೂ ಮೋದಿ ಸರ್ಕಾರದಂತೆ ಜನರ ಬಗ್ಗೆ ನಿರ್ಲಕ್ಷ್ಯತನದ ವರ್ತನೆ ಬೆಳೆಸಿಕೊಂಡಿವುದು ಬೇಸರದ ಸಂಗತಿ’ ಎಂದು ಕಾಂಗ್ರೆಸ್ ನಾಯಕ ಶಶಿತರೂರ್ ಟೀಕಿಸಿದ್ದಾರೆ.
ದಟ್ಟ ಮಂಜಿನ ಪರಿಣಾಮ ದೆಹಲಿಯಲ್ಲಿ ವಿಮಾನಯಾನದಲ್ಲಿ ಆಗಿರುವ ತೀವ್ರ ವ್ಯತ್ಯಯದ ಹಿನ್ನೆಲೆಯಲ್ಲಿ ಅವರು ಈ ಕುರಿತು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಮಾನಯಾನ ವ್ಯತ್ಯಯ ಕುರಿತ ಸಿಂಧಿಯಾ ಹೇಳಿಕೆಗೆ ಪ್ರತಿಯಾಗಿ ‘ಎಕ್ಸ್’ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ‘ಸಚಿವರು ಆರಾಮವಾಗಿ ಇರುವ ಧೋರಣೆ ಬಿಟ್ಟು ಜನರ ಕೋಪ ತಣಿಸಲು ಗಮನಹರಿಸಲಿ’ ಎಂದಿದ್ದಾರೆ.
ಬುಧವಾರ ಹೇಳಿಕೆ ನೀಡಿದ್ದ ಸಿಂಧಿಯಾ ಅವರು, ‘ತರೂರ್ ನಿಘಂಟಿನಲ್ಲಿ ಕಳೆದುಹೋಗಿದ್ದಾರೆ. ಇಂಟರ್ನೆಟ್ನಲ್ಲಿ ಆಯ್ದ ಪತ್ರಿಕಾ ಹೇಳಿಕೆಗಳಿಂದ ಅಂಕಿ– ಅಂಶ ಆಯ್ಕೆ ಮಾಡುವ ಸಂಶೋಧನೆಗೆ ಸೀಮಿತವಾಗಿದ್ದಾರೆ’ ಎಂದು ಟೀಕಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸುತ್ತಾ ತರೂರ್ ಅವರು, ‘ಸಿಂಧಿಯಾ ಅವರ ಅಯ್ದ ಹೇಳಿಕೆಗೆ ಪ್ರತಿಕ್ರಿಯಿಸಲು ನಿಘಂಟಿನ ಅಗತ್ಯವಿಲ್ಲ. ಜ 14, 15ರಂದು ವಿಮಾನ ಯಾನ ರದ್ದತಿಯಿಂದ 80 ಸಾವಿರ ಪ್ರಯಾಣಿಕರಿಗೆ, ವಿಳಂಬದಿಂದಾಗಿ ಲಕ್ಷಾಂತರ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಸಚಿವರೇ, ಅಹಂಕಾರ ಬಿಡಿ, ಮೊದಲು ಜನರ ಕ್ಷಮೆ ಕೇಳಿ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.