ADVERTISEMENT

ಆಧಾರ್‌ ದುರ್ಬಳಕೆ: ಕಠಿಣ ಶಿಕ್ಷೆ ಅಗತ್ಯ

ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಮೆರಿಕದ ಎಡ್ವರ್ಡ್‌ ಸ್ನೋಡೆನ್‌ ಒತ್ತಾಯ

ಪಿಟಿಐ
Published 18 ಆಗಸ್ಟ್ 2018, 12:03 IST
Last Updated 18 ಆಗಸ್ಟ್ 2018, 12:03 IST
ಎಡ್ವರ್ಡ್‌ ಸ್ನೋಡೆನ್‌
ಎಡ್ವರ್ಡ್‌ ಸ್ನೋಡೆನ್‌   

ಜೈಪುರ: ಸಾರ್ವಜನಿಕ ಸೇವೆಗಳಿಗಲ್ಲದೆ ಅನ್ಯ ಉದ್ದೇಶಗಳಿಗೆ ಆಧಾರ್‌ ಮಾಹಿತಿ ಬಳಸಿಕೊಂಡರೆ ಸರ್ಕಾರ ಅಂತವರಿಗೆ ದಂಡ ವಿಧಿಸಬೇಕು ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಮೆರಿಕದ ಎಡ್ವರ್ಡ್‌ ಸ್ನೋಡೆನ್‌ ಒತ್ತಾಯಿಸಿದ್ದಾರೆ.

ವಾರಾಂತ್ಯದಲ್ಲಿ ನಡೆದ ‘ಟಾಕ್‌ ಜರ್ನಲಿಸಂ’ 5ನೇ ಆವೃತ್ತಿಯ ಕಾರ್ಯಕ್ರಮ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅವರು ಮಾತನಾಡಿದರು.

ಭಾರತ ಸರ್ಕಾರ ಸಾರ್ವಜನಿಕ ಸೇವೆ ಮತ್ತು ಸೌಲಭ್ಯಗಳಿಗೆ ಆಧಾರ್‌ ಕಡ್ಡಾಯಗೊಳಿಸುತ್ತಿರುವುದು ಒಳ್ಳೆಯದೇ. ಆದರೆ, ಆಧಾರ್‌ ಮಾಹಿತಿಯನ್ನು ಯಾರಾದರೂ ದುರ್ಬಳಕೆ ಮಾಡಿಕೊಂಡರೆ ಅಂತಹವರನ್ನು ಖಂಡಿತಾ ‘ಅಪರಾಧ ದಂಡ’ ಶಿಕ್ಷೆಗೆ ಗುರಿಪಡಿಸುವುದನ್ನೂ ಸಹ ಖಾತರಿಪಡಿಸಬೇಕು ಎಂದರು.

ADVERTISEMENT

ಸಮೂಹದ ಮೇಲೆ ಕಣ್ಗಾವಲಿಡುವ ಆಧಾರ್‌ನಂತಹ ಯೋಜನೆ, ಇಡೀ ಸಮಾಜವನ್ನು ವ್ಯವಸ್ಥಿತಗೊಳಿಸಬಹುದು. ಆದರೆ, ಇದನ್ನು ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ತನ್ನ ಯೋಜನೆಯಲ್ಲಿ ಹೇಳಿಲ್ಲ ಎಂದು ತಿಳಿಸಿದರು.

ಕಣ್ಗಾವಲು ವಿಷಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಿಮಗೆ ಹಕ್ಕುಗಳಿಲ್ಲ’ ಎಂದು ಯಾವುದೇ ಸರ್ಕಾರ ಹೇಳುವುದಿಲ್ಲ. ಜನರ ಸುರಕ್ಷತೆ ಮತ್ತು ಅವರ ಹಕ್ಕುಗಳ ರಕ್ಷಣೆಗೆ ಹೊಸ ಯೋಜನೆ ತರುತ್ತಿರುವುದಾಗಿ ಸರ್ಕಾರ ಹೇಳುತ್ತಿದೆ ಎಂದರು.

ಖಾಸಗಿತನದ ಹಕ್ಕಿನ ಅವಶ್ಯಕತೆಯನ್ನು ಸರ್ಕಾರಕ್ಕೆ ಜನರು ಬಿಡಿಸಿ ಹೇಳಬೇಕಿಲ್ಲ. ಆದರೆ, ಜನರಿಗೆ ಖಾಸಗಿತನ ಹಕ್ಕಿಲ್ಲ ಎನ್ನುವುದನ್ನು ಸರ್ಕಾರ ಬಿಡಿಸಿ ಹೇಳಬೇಕಾಗುತ್ತದೆ. ಯುವಜನರು ಖಾಸಗಿತನದ ಹಕ್ಕುಗಳ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲ ಎನ್ನುವುದು ಒಂದು ಸುಳ್ಳು. ಅವರು ಖಾಸಗಿತನದ ಹಕ್ಕಿನ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ ಎಂದು ಸ್ನೋಡೆನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.