ಶ್ರೀನಗರ: ಕೇಂದ್ರ ಸರ್ಕಾರವು ಕಳೆದ ವರ್ಷ ಆಗಸ್ಟ್ 5ರಂದು ಕೈಗೊಂಡಿದ್ದ ಹಗೆತನದ ಕ್ರಮಗಳಿಂದ ಜಮ್ಮು–ಕಾಶ್ಮೀರಕ್ಕೆ ಒಳಿತಾಗಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಹೇಳಿದೆ. ಹಿಂದೆ ರಾಜ್ಯಕ್ಕೆ ಇದ್ದ ವಿಶೇಷ ಗುರುತನ್ನು ಮರಳಿ ಸ್ಥಾಪಿಸಲು ಪಕ್ಷವು ಹೋರಾಡಲಿದೆ ಎಂದೂ ಎನ್ಸಿ ವಕ್ತಾರರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಅಲಿ ಮುಹಮ್ಮದ್ ಸಾಗರ್ ಅಧ್ಯಕ್ಷತೆಯಲ್ಲಿ ಶ್ರೀನಗರದಲ್ಲಿ ನಡೆದ ಪಕ್ಷದ ಸಭೆಯ ಬಳಿಕ ಈ ಪ್ರಕಟಣೆ ಬಿಡುಗಡೆ ಮಾಡಲಾಗಿದೆ. ಕಳೆದ ಒಂದು ವರ್ಷದಲ್ಲಿ ನಡೆದ ಪಕ್ಷದ ಮೊದಲ ಸಭೆ ಇದಾಗಿದೆ. ಒಂದು ವರ್ಷದಿಂದ ಬಂಧನದಲ್ಲಿದ್ದ ಅಲಿ ಮುಹಮ್ಮದ್ ಇತ್ತೀಚೆಗೆ ಬಿಡುಗಡೆಯಾಗಿದ್ದರು. ಬಳಿಕ ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳನ್ನು ಉದ್ದೇಶಿಸಿ ಸಭೆ ನಡೆಸಿದ್ದಾರೆ.
‘ನಮ್ಮ ಪಕ್ಷವು ಜಮ್ಮು–ಕಾಶ್ಮೀರದ ಜನರೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದು, ಪ್ರಾರಂಭವಾದಾಗಿನಿಂದ ವಿವಿಧ ತಿರುವುಗಳನ್ನು ಕಂಡಿದೆ. ಪಕ್ಷವು ಜಮ್ಮು–ಕಾಶ್ಮೀರ ಜನರ ಆಕಾಂಕ್ಷೆಗಳಿಗೆ ಕನ್ನಡಿ ಹಿಡಿಯಲಿದೆ. ಜಮ್ಮು–ಕಾಶ್ಮೀರ ರಾಜಕಾರಣದಿಂದ ನ್ಯಾಷನಲ್ ಕಾನ್ಫರೆನ್ಸ್ ಅನ್ನು ಅಳಿಸಿಹಾಕಲು ವಿಶ್ವದ ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ. ಜನರ ನಂಬಿಕೆ, ನಮ್ಮ ಅಸಂಖ್ಯಾತ ನಾಯಕರು, ಕಾರ್ಮಿಕರು, ಸಹವರ್ತಿಗಳು ಮತ್ತು ಪ್ರತಿನಿಧಿಗಳ ತ್ಯಾಗವೇ ನಮ್ಮನ್ನು ಮುಂದುವರಿಸಿದೆ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.