ಚೆನ್ನೈ: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ–2020’ (ಎನ್ಇಪಿ) ಹಾಗೂ ‘ತ್ರಿಭಾಷಾ ನೀತಿ’ಯನ್ನು ತಿರಸ್ಕರಿಸಿದ್ದರಿಂದ ಕೇಂದ್ರ ಸರ್ಕಾರವು ತಮಿಳುನಾಡು ಸರ್ಕಾರದ ವಿರುದ್ಧ ಬಹಿರಂಗವಾಗಿ ಬ್ಲ್ಯಾಕ್ಮೇಲ್, ದಬ್ಬಾಳಿಕೆ ಅನುಸರಿಸುತ್ತಿದೆ. ರಾಜ್ಯಕ್ಕೆ ಬರಬೇಕಿದ್ದ ₹2,152 ಕೋಟಿಯನ್ನು ಕಿತ್ತು ಬೇರೆ ರಾಜ್ಯಗಳಿಗೆ ನೀಡಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ತಮಿಳುನಾಡಿನ ವಿರುದ್ಧ ಕೇಂದ್ರದ ಬಿಜೆಪಿ ಸರ್ಕಾರದಿಂದ ಅನ್ಯಾಯದ ಮಿತಿಗೆ ಕೊನೆಯೇ ಇಲ್ಲ. ಎನ್ಇಪಿ, ತ್ರಿಭಾಷಾ ನೀತಿ ತಿರಸ್ಕರಿಸಿದ್ದಕ್ಕೆ ತಮಿಳುನಾಡು ವಿದ್ಯಾರ್ಥಿಗಳಿಗೆ ಸಿಗಬೇಕಿದ್ದ ₹2,152 ಕೋಟಿ ಹಣವನ್ನು ಕಿತ್ತು ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಇದು ದಬ್ಬಾಳಿಕೆಗಿಂತ ಕಡಿಮೆಯಿಲ್ಲ, ಅವರ ಹಕ್ಕುಗಳಿಗಾಗಿ ಹೋರಾಡಿದ್ದಕ್ಕೆ ಈ ರೀತಿ ಶಿಕ್ಷಿಸಲಾಗಿದೆ’ ಎಂದು ದೂರಿದ್ದಾರೆ.
‘ಭಾರತದ ಇತಿಹಾಸದಲ್ಲಿಯೇ, ಯಾವುದೇ ಸರ್ಕಾರವು ರಾಜ್ಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಶಿಕ್ಷಣದ ಹಕ್ಕನ್ನು ಕತ್ತು ಹಿಸುಕುವಷ್ಟು ನಿರ್ದಯವಾಗಿಲ್ಲ. ತಮಿಳುನಾಡಿಗೆ ಅನ್ಯಾಯ ಹಾಗೂ ಬಿಜೆಪಿಯ ದ್ವೇಷದ ಮುಖವನ್ನು ಈ ಮೂಲಕ ಸಾಬೀತುಪಡಿಸಿದೆ’ ಎಂದು ಸ್ಟಾಲಿನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.