ನವದೆಹಲಿ: ಹೊಸದಾಗಿ ನಿರ್ಮಿಸಲಾಗುತ್ತಿರುವ ಸಂಸತ್ ಭವನದ ಕಟ್ಟಡದ ಮೇಲೆ ಸ್ಥಾಪಿಸಲಾಗಿರುವ ರಾಷ್ಟ್ರ ಲಾಂಛನದಲ್ಲಿರುವ ಸಿಂಹಗಳ ವಿನ್ಯಾಸವನ್ನು ಆಕ್ಷೇಪಿಸಿ ಸಲ್ಲಿಸಲಾಗಿದ್ದಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ವಕೀಲರಾದ ಆಲ್ದನಿಶ್ ರೀನ್ ಮತ್ತು ರಮೇಶ್ ಕುಮಾರ್ ಮಿಶ್ರ ಅವರು ಲಾಂಛನದ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಸಿಂಹಗಳ ಬಾಯಿ ತೆರೆದಿದೆ ಮತ್ತು ಕೋರೆಹಲ್ಲುಗಳು ಕಾಣುತ್ತವೆ. ಅವನ್ನು ‘ಉಗ್ರ ಮತ್ತು ಆಕ್ರಮಣಕಾರಿ’ಯಂತೆ ತೋರಿಸಲಾಗಿದೆ ಎಂದು ಅವರು ಅರ್ಜಿಯಲ್ಲಿ ಆಕ್ಷೇಪಿಸಿದ್ದರು. ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠ ಈ ಅರ್ಜಿಯನ್ನು ತಿರಸ್ಕರಿಸಿದೆ. ‘ವ್ಯಕ್ತಿಯ ಮನಸ್ಥಿತಿಯ ಮೇಲೆ ಆತನ ಅಭಿಪ್ರಾಯ ನಿರ್ಧಾರವಾಗುತ್ತದೆ’ ಎಂದು ಪೀಠ ಹೇಳಿದೆ.
ಹೊಸದಾಗಿ ಮಾಡಲಾಗಿರುವ ಲಾಂಛನದ ವಿನ್ಯಾಸವು ಭಾರತ ರಾಷ್ಟ್ರ ಲಾಂಛನ (ಅನುಚಿತ ಬಳಕೆ ತಡೆ) ಕಾಯ್ದೆ– 2005ರ ಉಲ್ಲಂಘನೆಯಾಗಿದೆ. ಸ್ವೀಕೃತವಾದ ರಾಷ್ಟ್ರ ಲಾಂಛನ ವಿನ್ಯಾಸವನ್ನು ಮಾರ್ಪಾಡು ಮಾಡುವಂತಿಲ್ಲ. ಲಾಂಛನದಲ್ಲಿ ‘ಸತ್ಯಮೇವ ಜಯತೇ’ಯ ಚಿಹ್ನೆ ಕಾಣೆಯಾಗಿದೆ ಎಂದು ಅರ್ಜಿದಾರರು ಅರ್ಜಿಯಲ್ಲಿ ಹೇಳಿದ್ದರು.
ಇದಕ್ಕೆ ಉತ್ತರಿಸಿರುವ ಪೀಠ, ಲಾಂಛನದ ವಿನ್ಯಾಸವನ್ನು ಅರ್ಜಿದಾರರು ನಿರ್ಧರಿಸುವಂತಿಲ್ಲ. ಈ ಲಾಂಛನದ ವಿನ್ಯಾಸವು ಭಾರತ ರಾಷ್ಟ್ರ ಲಾಂಛನ–2005ರ ಉಲ್ಲಂಘನೆ ಎಂದು ಹೇಳಲಾಗುವುದಿಲ್ಲ ಎಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.