ADVERTISEMENT

ಕರ್ನಾಟಕದಿಂದ ಕಬ್ಬಿಣ ಅದಿರು ರಫ್ತು ಮೇಲಿನ ನಿರ್ಬಂಧ ತೆರವು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 14:26 IST
Last Updated 17 ಏಪ್ರಿಲ್ 2022, 14:26 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಕರ್ನಾಟಕದಿಂದ ಕಬ್ಬಿಣ ಅದಿರು ರಫ್ತಿನ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಬೇಕು ಎಂಬ ಬೇಡಿಕೆಗೆ ಉಕ್ಕು ಸಚಿವಾಲಯ ಬೆಂಬಲ ಸೂಚಿಸಿದೆ.

ರಫ್ತಿನ ಮೇಲೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸುವಂತೆ ಗಣಿ ಸಚಿವಾಲಯವು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ ಬೆನ್ನಲ್ಲೇ, ಉಕ್ಕು ಸಚಿವಾಲಯದಿಂದ ಇಂಥದೇ ಬೇಡಿಕೆ ವ್ಯಕ್ತವಾಗಿದೆ. ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠವು ಈ ವಿಷಯಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಸೋಮವಾರ (ಏ.18) ನಡೆಸಲಿದೆ.

ಇತರ ರಾಜ್ಯಗಳು ಹಾಗೂ ಕರ್ನಾಟಕದಲ್ಲಿರುವ ಕಬ್ಬಿಣ ಅದಿರು ಗಣಿಗಳ ನಡುವಿನ ತಾರತಮ್ಯ ಕೊನೆಗಾಣಿಸಬೇಕು ಎಂದುಉಕ್ಕು ಸಚಿವಾಲಯವು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ. ಹೀಗೆ ಮಾಡುವುದರಿಂದ ಕರ್ನಾಟಕದ ಗಣಿಗಳಿಂದ ಹೊರತೆಗೆಯಲಾದ ಅದಿರನ್ನು ಇತರ ರಾಜ್ಯಗಳಿಗೆ ಮಾರಾಟ ಮಾಡಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ADVERTISEMENT

ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಕಬ್ಬಿಣ ಅದಿರಿನ ಗಣಿಗಾರಿಕೆ ಮೇಲೆ ಮಿತಿ ಹೇರಿ ನೀಡಿರುವ ಆದೇಶವನ್ನು ತೆರವುಗೊಳಿಸಬೇಕು. ಇದರಿಂದ ಅಗತ್ಯ ಪ್ರಮಾಣದ ಅದಿರು ಲಭ್ಯವಾಗುವುದನ್ನು ಖಾತ್ರಿಪಡಿಸಿದಂತಾಗುವುದು ಎಂದೂ ಸಚಿವಾಲಯವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಅದಿರಿನ ರಫ್ತಿನ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಬೇಕು ಎಂಬ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿಗಣಿ ಸಚಿವಾಲಯ ಸಲ್ಲಿಸಿದ್ದ ಅರ್ಜಿಯನ್ನು ಸ್ವಯಂಸೇವಾ ಸಂಸ್ಥೆ ಸಮಾಜ ಪರಿವರ್ತನಾ ಸಮುದಾಯ ವಿರೋಧಿಸಿತ್ತು. ಈ ಬೇಡಿಕೆ ಬಗ್ಗೆ ಉಕ್ಕು ಸಚಿವಾಲಯ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಸಂಸ್ಥೆ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.