
ಲಖನೌ: ಇಲ್ಲಿ ಜನವರಿ 17ರಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಗಡಿ-ಕನ್ನಡ ಸುಗ್ಗಿ ಸಂಕ್ರಾಂತಿ ಸಾಂಸ್ಖೃತಿಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ ಹಾಗೂ ಉತ್ತರಪ್ರದೇಶದ ರಾಜಧಾನಿ ಲಖನೌದಲ್ಲಿರುವ ಕನ್ನಡ ಅಸೋಸಿಯೇಷನ್ ಲಖನೌ ಕುರ್ಸಿ ರೋಡ್ ಯುನಿಟಿ ಸಿಟಿ ಬಹುದ್ದೂರ್ ಪುರ್, ಲಖನೌ ಉತ್ತರಪ್ರದೇಶ ಇವರ ಸಹಯೋಗದಲ್ಲಿ ‘ಸುಗ್ಗಿ ಸಂಕ್ರಾಂತಿ’ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಕಲಾವಿದರಿಂದ ಹಾಗೂ ಗಡಿ ಭಾಗದ ಜಾನಪದ ತಂಡಗಳಿಂದ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಕಥಕ್ ನೃತ್ಯ,ಗುಂಪು ನೃತ್ಯ, ಮುಂತಾದ ಕಲಾ ಪ್ರಕಾರಗಳ ಪ್ರದರ್ಶನ ನಡೆಯಿತು. ಮಿಮಿಕ್ರಿ ಗೋಪಿಯವರಿಂದ ಮಿಮಿಕ್ರಿ, ಕೋಲಾರದ ಮತ್ತಿಕುಂಟೆ ಕೃಷ್ಣ ಮತ್ತು ಗೊ ನಾ ಸ್ವಾಮಿಯವರಿಂದ ಹಾಗೂ ಅಬಕಾರಿ ಇಲಾಖೆಯ ರಾಜಶೇಖರ್ರವರಿಂದ ಜಾನಪದ ಗಾಯನ ನಡೆಯಿತು. ವಿಜಯ ಮತ್ತು ತಂಡದಿಂದ ಜಾನಪದ ನೃತ್ಯ ವರ್ಷಿತಾ ಮತ್ತು ತಂಡದಿಂದ ಜಾನಪದ ಗಾಯನ ಗುಣವತಿ ಮತ್ತು ತಂಡದಿಂದ ಭರತನಾಟ್ಯ ,ಸ್ಪಂದನ್ ದೆಹಲಿ ರವರಿಂದ ಕಥಕ್ ನೃತ್ಯ ಗಮನಸೆಳೆಯಿತು.
ಲಖನೌನಲ್ಲಿರುವ ಕನ್ನಡಿಗರ ಕುಟುಂಬದ ಮಕ್ಕಳಿಗೆ ಕನ್ನಡ ಕಲಿಸಲು ಒಬ್ಬ ಸೂಕ್ತ ತರಬೇತುದಾರರನ್ನು ಗುರುತಿಸಿ, ಕನ್ನಡ ಪಾಠ ಕೇಂದ್ರ ಪ್ರಾರಂಭಿಸಲು ಲಖನೌ ಕನ್ನಡ ಸಂಘದವರು ನಿರ್ಣಯಿಸಿರುವ ವಿಷಯವನ್ನು ಕರ್ನಾಟಕ ಸರ್ಕಾರದ ಗಮನಕ್ಕೆ ತಂದರು.
ಈ ಕಾರ್ಯಕ್ರಮದಲ್ಲಿ ಲಖನೌ ಕನ್ನಡ ಅಸೋಸಿಯೇಷನ್ ಅಧ್ಯಕ್ಷೆ, ಕನ್ನಡತಿ ಡಾ. ಗಾಯತ್ರಿ, ರಾಷ್ಟ್ರೀಯ ಬಟಾನಿಕಲ್ ರಿಸರ್ಚ ಸಂಸ್ಥೆಯ ಹಿರಿಯ ವಿಜ್ಞಾನಿ,ಹಾಗೂ ಸಂಸ್ಥೆಯ ಕಾರ್ಯದರ್ಶಿ ಡಾ. ಸಂಜೀವ ನಾಯಕ, ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಶಿಕ್ಷಣ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ, ಗಡಿ ಪ್ರಾಧಿಕಾರದ ಸದಸ್ಯ ಶಿವರೆಡ್ಡಿ, ಡಾ. ಸಂಜೀವಕುಮಾರ್ ಅತಿವಾಳೆ, ಸಮಾಜ ಸೇವಕಿ ಜಾನಕಿ ಮುಂತಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.