ADVERTISEMENT

ಜೆಎನ್‌ಯು ಹಿಂಸಾಚಾರ: ವಾಟ್ಸ್ಯಾಪ್ ಗ್ರೂಪ್ ಸದಸ್ಯರಿಗೆ ದೆಹಲಿ ಹೈಕೋರ್ಟ್ ಸಮನ್ಸ್

ಮೊಬೈಲ್ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ

ಏಜೆನ್ಸೀಸ್
Published 14 ಜನವರಿ 2020, 8:43 IST
Last Updated 14 ಜನವರಿ 2020, 8:43 IST
   

ನವದೆಹಲಿ: ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಎರಡುವಾಟ್ಸ್ಯಾಪ್‌ ಗ್ರೂಪ್‌ನ ಎಲ್ಲ ಸದಸ್ಯರಿಗೆ ಸಮನ್ಸ್‌ ಜಾರಿ ಮಾಡುವಂತೆ ಮತ್ತು ಅವರ ಮೊಬೈಲ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆದೆಹಲಿ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ಹಿಂಸಾಚಾರದಿಂದ ಗಾಯಗೊಂಡಮೂವರು ಜೆಎನ್‌ಯು ಪ್ರಾಧ್ಯಾಪಕರು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಮೇಲಿನಂತೆ ಆದೇಶಿಸಿತು.

‘ಹಿಂಸಾಚಾರದ ಬಗ್ಗೆವ್ಯವಸ್ಥಿತ ಸಂಚು ರೂಪುಗೊಂಡಿತ್ತು. ಹಲವು ವಾಟ್ಸ್ಯಾಪ್‌ ಗ್ರೂಪ್‌ಗಳು ಸಂಚು ರೂಪಿಸಲು ಬಳಕೆಯಾಗಿತ್ತು’ ಎಂದುಪ್ರಾಧ್ಯಾಪಕರಾದ ಅಮೀತ್ ಪರಮೇಶ್ವರನ್, ಅತುಲ್ ಸೂದ್ ಮತ್ತು ಶುಕ್ಲ ವಿನಾಯಕ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ಫ್ರೆಂಡ್ಸ್ ಆಫ್ ಆರ್‌ಎಸ್‌ಎಸ್‌ ಮತ್ತು ಯೂನಿಟಿ ಎಗೈನ್‌ಸ್ಟ್ ಲೆಫ್ಟ್ ವಾಟ್ಸ್ಯಾಪ್‌ ಗ್ರೂಪ್‌ಗಳನ್ನು ಹಿಂಸಾಚಾರದ ಸಂಚು ರೂಪಿಸಲು ಬಳಸಲಾಗಿತ್ತು ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಾಧ್ಯಾಪಕರು ದೂರಿದ್ದರು.

ಹಿಂಸಾಚಾರದ ನಂತರ ಆಕ್ಷೇಪಾರ್ಹ ವಿಡಿಯೊಗಳು ಮತ್ತು ಸ್ಕ್ರೀನ್‌ಶಾಟ್‌ಗಳು ವಾಟ್ಸ್ಯಾಪ್‌ ಗ್ರೂಪ್‌ಗಳಲ್ಲಿ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇದು ಹಿಂಸಾಚಾರವನ್ನು ವ್ಯವಸ್ಥಿತವಾಗಿ ಸಂಘಟಿಸಲಾಗಿತ್ತು ಎಂಬುದನ್ನು ಪುಷ್ಟೀಕರಿಸುತ್ತದೆ ಎಂದು ಅರ್ಜಿದಾರರು ಹೇಳಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆವಾಟ್ಸ್ಯಾಪ್‌ ಮತ್ತು ಗೂಗಲ್‌ ಸಂಸ್ಥೆಗಳು ಎಲ್ಲ ದತ್ತಾಂಶಗಳನ್ನೂ ರಕ್ಷಿಸಿಡಬೇಕು ಎಂದು ಹೈಕೋರ್ಟ್‌ ಎರಡೂ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಈ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ವಾಟ್ಸ್ಯಾಪ್‌ ಕಂಪನಿಯ ವಕೀಲರು, ‘ಕಂಪನಿಯ ಸರ್ವರ್‌ಗಳಲ್ಲಿ ಮೆಸೇಜ್‌ಗಳನ್ನು ಸೇವ್‌ ಮಾಡುವುದಿಲ್ಲ. ಗ್ರೂಪ್‌ನ ಸದಸ್ಯರಿಂದಷ್ಟೇ ಅವನ್ನು ಪಡೆಯಲು ಸಾಧ್ಯ’ ಎಂದು ತಿಳಿಸಿದರು.

ಮದ್ರಾಸ್ ಹೈಕೋರ್ಟ್‌ ಆದೇಶದ ಪ್ರಕಾರ ವಾಟ್ಸ್ಯಾಪ್‌ ಕೇವಲ ಮೆಟಾಡೇಟಾವನ್ನು ಮಾತ್ರ ಒದಗಿಸಬಲ್ಲದು. ನಿರ್ದಿಷ್ಟ ಬಳಕೆದಾರರು ಯಾವ ಐಪಿಯಿಂದ (ಇಂಟರ್ನೆಟ್ ಪ್ರೊಟೊಕಾಲ್) ಕೊನೆಯ ಬಾರಿಗೆ ಬಳಸಿದ್ದಾರೆ ಎಂಬ ಮಾಹಿತಿ ತಿಳಿಸಬಹುದು ಎಂದು ವಾಟ್ಸ್ಯಾಪ್‌ ವಕೀಲರು ನುಡಿದರು.

ವಕೀಲರ ವಾದಆಲಿಸಿದ ನಂತರ ನ್ಯಾಯಾಲಯವು ಪೊಲೀಸರಿಗೆ ಎರಡೂ ವಾಟ್ಸ್ಯಾಪ್‌ ಗ್ರೂಪ್‌ನ ಎಲ್ಲ ಸದಸ್ಯರಿಗೆ ಸಮನ್ಸ್ ಜಾರಿ ಮಾಡುವಂತೆ ಮತ್ತು ಅವರ ಮೊಬೈಲ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆತನ್ನ ಸರ್ವರ್‌ಗಳಲ್ಲಿ ಲಭ್ಯವಿರುವ ಎಲ್ಲ ದತ್ತಾಂಶ ನೀಡುವುದಾಗಿ ಗೂಗಲ್ ಕಂಪನಿಯ ವಕೀಲರುನ್ಯಾಯಾಲಯದಲ್ಲಿ ನುಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್‌ಯು ವಿವಿಯ 135 ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ರಕ್ಷಿಸಿಡಬೇಕು ಎಂದು ಸೂಚಿಸಲಾಗಿದೆ ಎಂದು ದೆಹಲಿ ಪೊಲೀಸರ ಪರ ವಾದ ಮಂಡಿಸಿದ ವಕೀಲ ರಾಹುಲ್ ಮೆಹ್ರಾ ನುಡಿದರು.

ಮೂವರು ಪ್ರಾಧ್ಯಾಪಕರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆನ್ಯಾಯಾಲಯವು ಸೋಮವಾರ ವಾಟ್ಸ್ಯಾಪ್, ಗೂಗಲ್ ಮತ್ತು ಆ್ಯಪಲ್ ಕಂಪನಿಗಳಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.