ನವದೆಹಲಿ: ಪತ್ನಿ ಸುನಂದಾ ಪುಷ್ಕರ್ ಅವರ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ವಿರುದ್ಧ ಆರೋಪ ಪಟ್ಟಿ ಸಿದ್ಧಪಡಿಸುವ ವಿಷಯಕ್ಕೆ ಸಂಬಂಧಿಸಿದ ಆದೇಶವನ್ನು ದೆಹಲಿ ನ್ಯಾಯಾಲಯವು ಒಂದು ತಿಂಗಳ ಕಾಲ ಮುಂದೂಡಿದೆ.
ಕೋವಿಡ್–19 ಕಾರಣಕ್ಕಾಗಿ ಜೂನ್ 16ರ ತನಕ ಆದೇಶದ ಘೋಷಣೆಯನ್ನು ಮುಂದೂಡಲಾಗಿದೆ ಎಂದು ವಿಶೇಷ ನ್ಯಾಯಮೂರ್ತಿ ಗೀತಾಂಜಲಿ ಗೋಯಲ್ ಅವರು ಪ್ರಕಟಿಸಿದ್ದಾರೆ.
ದೆಹಲಿ ಪೊಲೀಸ್ ಮತ್ತು ಶಶಿ ತರೂರ್ ಅವರ ಪರ ಹಾಜರಾದ ವಕೀಲರ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯವು ಏಪ್ರಿಲ್ 12ರಂದು ಆದೇಶವನ್ನು ಕಾಯ್ದಿರಿಸಿತ್ತು.
ವಾದದ ವೇಳೆ ದೆಹಲಿ ಪೊಲೀಸರು ತರೂರ್ ಅವರ ವಿರುದ್ಧ 306 (ಆತ್ಮಹತ್ಯೆ) ಸೇರಿದಂತೆ ವಿವಿಧ ಆರೋಪ ಪಟ್ಟಿ ಸಿದ್ಧಪಡಿಸಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಕೋರಿದಾಗ, ತರೂರ್ ಪರ ಹಾಜರಿದ್ದ ಹಿರಿಯ ವಕೀಲ ವಿಕಾಸ್ ಪಹ್ವಾ ಅವರು ಎಸ್ಐಟಿಯು ತನಿಖೆ ನಡೆಸಿದ್ದು ತರೂರ್ ಅವರ ವಿರುದ್ಧ ಇದ್ದ ಎಲ್ಲಾ ಆರೋಪಗಳನ್ನು ಮುಕ್ತಗೊಳಿಸಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಈ ಪ್ರಕರಣದಲ್ಲಿ ತರೂರ್ ಅವರನ್ನು ಆರೋಪಮುಕ್ತಗೊಳಿಸಲು ಕೋರಿದ ವಿಕಾಸ್, ಸೆಕ್ಷನ್ 498 ಎ (ಗಂಡ ಅಥವಾ ಮಹಿಳೆಯ ಗಂಡನ ಸಂಬಂಧಿ ಅವಳನ್ನು ಕ್ರೌರ್ಯಕ್ಕೆ ಒಳಪಡಿಸುವುದು) ಅಥವಾ ಐಪಿಸಿಯ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಶಿಕ್ಷಾರ್ಹವೆಂದು ಸಾಬೀತುಪಡಿಸಲು ತರೂರ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದೂ ಹೇಳಿದ್ದಾರೆ.
2014ರ ಜ. 17ರಂದು ದೆಹಲಿಯ ಐಷಾರಾಮಿ ಹೋಟೆಲೊಂದರ ಕೋಣೆಯಲ್ಲಿ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರು ಶವವಾಗಿ ಪತ್ತೆಯಾಗಿದ್ದರು. ಈ ಸಮಯದಲ್ಲಿ ತರೂರ್ ಅವರ ಅಧಿಕೃತ ಬಂಗಲೆಯನ್ನು ನವೀಕರಣ ಮಾಡಲಾಗುತ್ತಿತ್ತು. ಹಾಗಾಗಿ, ದಂಪತಿ ಹೋಟೆಲ್ನಲ್ಲಿ ತಂಗಿದ್ದರು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಮತ್ತು 306ರ ಅಡಿಯಲ್ಲಿ ದೆಹಲಿ ಪೊಲೀಸರು ಶಶಿ ತರೂರ್ ಅವರ ವಿರುದ್ಧ ಆರೋಪ ಹೊರಿಸಿದ್ದರು. ಆದರೆ, ಪ್ರಕರಣದಲ್ಲಿ ಅವರನ್ನು ಬಂಧಿಸಿರಲಿಲ್ಲ. ತರೂರ್ ಅವರು 2018ರ ಜುಲೈ 5ರಂದು ಜಾಮೀನು ಪಡೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.