
ಕೋಯಿಕ್ಕೋಡ್: 27 ವರ್ಷದ ವೃತ್ತಿ ಬದುಕಿನಲ್ಲಿ ಬರೋಬ್ಬರಿ 608 ದಿನಗಳನ್ನು ಬಾಹ್ಯಾಕಾಶದಲ್ಲೇ ಕಳೆದರೂ ಮತ್ತೊಂದು ಬಾಹ್ಯಾಕಾಶ ಯೋಜನೆಯ ಭಾಗವಾಗುವ ಅವಕಾಶ ಕೈ ತಪ್ಪಿಹೋಗುತ್ತದೆ ಎಂಬ ಆತಂಕ ತನ್ನನ್ನು ಈಗಲೂ ಕಾಡುತ್ತದೆ ಎಂದು ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿದ ಗಗನಯಾನಿ ಸುನಿತಾ ವಿಲಿಯಮ್ಸ್ ಹೇಳಿದ್ದಾರೆ.
ಈ ಮೂಲಕ ಬಾಹ್ಯಾಕಾಶ ಪಯಣ, ಅನ್ವೇಷಣೆ ಹಾಗೂ ಗಗನಯಾನದ ಬಗೆಗಿನ ತಮ್ಮ ಅಪಾರ ಒಲವನ್ನು ಸುನಿತಾ ವ್ಯಕ್ತಪಡಿಸಿದ್ದಾರೆ.
ಕೇರಳ ಸಾಹಿತ್ಯೋತ್ಸವದಲ್ಲಿ ‘ಡ್ರೀಮ್ಸ್ ರೀಚ್ ಆರ್ಬಿಟ್’ ಎಂಬ ಗೋಷ್ಠಿಯಲ್ಲಿ ಸುನಿತಾ ಮಾತನಾಡಿದರು. ಈ ವೇಳೆ, ನಾಸಾದ ಉದ್ದೇಶಿತ ಆರ್ಟೆಮಿಸ್–2 ಚಂದ್ರಯಾನ ಯೋಜನೆಯ ಬಗ್ಗೆ ಪ್ರಸ್ತಾಪಿಸಿದರು.
‘ಚಂದ್ರಯಾನ ಕೈಗೊಳ್ಳಬೇಕು ಎಂಬ ಬಯಕೆ ಯಾರಿಗಿರುವುದಿಲ್ಲ? ನಾನು ನಾಸಾ ಸೇರಲು ಈ ಬಯಕೆಯೂ ಒಂದು ಪ್ರಮುಖ ಕಾರಣವಾಗಿತ್ತು. ಹೀಗಾಗಿ ಆ ಅವಕಾಶ ನನ್ನ ಕೈತಪ್ಪಿ ಹೋಗುತ್ತಿದೆ ಎಂಬ ಆತಂಕ ನನ್ನನ್ನು ಕಾಡುತ್ತದೆ. ಆದರೆ, ನನ್ನ ಸಹೋದ್ಯೋಗಿಗಳು, ಸ್ನೇಹಿತರು ಈ ಯೋಜನೆಯ ಭಾಗವಾಗುವುದನ್ನು ನೋಡಲು ನಾನು ಉತ್ಸುಕಳಾಗಿದ್ದೇನೆ’ ಎಂದಿದ್ದಾರೆ.
ಜತೆಗೆ ‘ನಾನು ಬಾಹ್ಯಾಕಾಶದಲ್ಲಿದ್ದ ಕಾರಣ ಭೂಮಿ ಮೇಲಿನ ಹಲವು ಅದ್ಭುತ ಜಾಗಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಈಗ ಆ ಜಾಗಗಳಿಗೆಲ್ಲಾ ಭೇಟಿ ನೀಡುತ್ತಿದ್ದೇನೆ. ಆ ಪೈಕಿ ಕೇರಳವೂ ಒಂದು’ ಎಂದೂ ಹೇಳಿದ್ದಾರೆ.
ಇದೇ ವೇಳೆ, ತನ್ನನ್ನು ಭಾರತದ ಮಗಳು ಎಂದು ಪರಿಗಣಿಸಿ, ಸುರಕ್ಷಿತವಾಗಿ ಹಿಂದಿರುಗಬೇಕು ಎಂದು ಭಾರತೀಯರು ಆಶಿಸಿದ್ದರ ಬಗ್ಗೆಯೂ ಸುನಿತಾ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.