
ನವದೆಹಲಿ (ಪಿಟಿಐ): ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೊಸದಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಚಾರಣೆಗೆ ನಿಗದಿಪಡಿಸಲು ಸುಪ್ರೀಂ ಕೋರ್ಟ್ ಬುಧವಾರ ಸಮ್ಮತಿಸಿದೆ.
ಶರ್ಮಾ ಅವರು ಮುಸ್ಲಿಂ ಸಮುದಾಯಗಳನ್ನು ಗುರಿಯಾಗಿಸಿ ಸರಣಿ ದ್ವೇಷ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಮಾಜಿ ಪ್ರಾಧ್ಯಪಕಾರದ ಹಿರೇನ್ ಗೊಹೈನ್, ಅಸ್ಸಾಂನ ಮಾಜಿ ಡಿಜಿಪಿ ಹರೇಕೃಷ್ಣ ದೇಕಾ, ಹಿರಿಯ ಪತ್ರಕರ್ತರಾದ ಪರೇಶ್ ಚಂದ್ರ ಹಾಗೂ ಹಿರಿಯ ವಕೀಲರಾದ ಶಾಂತನು ಬೋರ್ಠಾಕೂರ್ ಈ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಶರ್ಮಾ ಅವರು ರೈಫಲ್ ಹಿಡಿದು ಅಲ್ಪಸಂಖ್ಯಾತ ಸಮುದಾಯದವರನ್ನು ಬಿಂಬಿಸುವ ಇಬ್ಬರು ವ್ಯಕ್ತಿಗಳ ಮೇಲೆ ಸಾಂಕೇತಿಕವಾಗಿ ಗುಂಡು ಹಾರಿಸುತ್ತಿರುವ ದೃಶ್ಯವನ್ನು ಒಳಗೊಂಡ ವಿಡಿಯೊ ಬಗ್ಗೆ ಇತ್ತೀಚೆಗೆ ಭಾರಿ ಆಕ್ಷೇಪವೂ ವ್ಯಕ್ತವಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಸಿಪಿಐ ನಾಯಕಿ ಆನಿ ರಾಜಾ ಹಾಗೂ ಸಿಪಿಎಂ ಪಕ್ಷಗಳು ಪ್ರತ್ಯೇಕವಾಗಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದವು. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠವು ಈ ಅರ್ಜಿಗಳನ್ನು ಆಲಿಸಲು ಮಂಗಳವಾರ ಒಪ್ಪಿಗೆಯನ್ನೂ ನೀಡಿದೆ.
ಎಡಪಕ್ಷದ ನಾಯಕರುಗಳ ಈ ಅರ್ಜಿಗಳ ಜತೆಗೆ ಹೊಸದಾಗಿ ಸಲ್ಲಿಸಿರುವ ಅರ್ಜಿಗಳನ್ನೂ ವಿಚಾರಣೆ ನಡೆಸಬೇಕೆಂದು ಬುಧವಾರ ಕೋರಲಾಗಿದ್ದು, ಪೀಠ ಸಮ್ಮತಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.