ನವದೆಹಲಿ: ಕಳೆದ 41 ವರ್ಷದಲ್ಲಿ ಪರಸ್ಪರ 60 ಪ್ರಕರಣಗಳನ್ನು ದಾಖಲಿಸಿಕೊಂಡ ವಿಚ್ಛೇದಿತ ಜೋಡಿಗೆ ಸಂಧಾನದ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
60 ಪ್ರಕರಣಗಳು ದಾಖಲಾದ ಬಗ್ಗೆ ಬುಧವಾರ ಅಚ್ಚರಿ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, 'ವಕೀಲರ ಜಾಣ್ಮೆ ಗಮನಾರ್ಹವಾಗಿದೆ' ಎಂದಿದೆ.
'ಏನು ಮಾಡುವುದು? ಕೆಲವು ಜನರು ಹೀಗೆ ಜಗಳ ಕಾಯ್ದುಕೊಂಡೇ ಇರುತ್ತಾರೆ. ಇಂತವರು ಯಾವಾಗಲೂ ಕೋರ್ಟ್ನಲ್ಲೇ ಇರಲು ಬಯಸುತ್ತಾರೆ. ಕೋರ್ಟ್ ನೋಡದಿದ್ದರೆ ಇವರಿಗೆ ನಿದ್ರೆಯೇ ಬರುವುದಿಲ್ಲ' ಎಂದು ತ್ರಿಸದಸ್ಯ ಪೀಠದ ಮುಖ್ಯ ನ್ಯಾಯಮೂರ್ತಿ ಎನ್. ರಮಣ ಸಿಡಿಮಿಡಿಗೊಂಡಿದ್ದಾರೆ.
ತಮ್ಮ ನಡುವಿನ ವಿವಾದವನ್ನು ಸಂಧಾನದ ಮೂಲಕ ಸೌಹಾರ್ದಯುತವಾಗಿ ಇತ್ಯರ್ಥ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಹಿಂದೂ ಪುರಾಣದಲ್ಲಿ 'ಅತ್ಯಾಚಾರ'ದ ಹೇಳಿಕೆ: ಎಎಂಯು ಉಪನ್ಯಾಸಕ ಅಮಾನತು
ಪೀಠದ ಇನ್ನಿಬ್ಬರು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರು ವಿಚ್ಛೇದಿತ ಜೋಡಿ ಪರಸ್ಪರ ದಾಖಲಿಸಿಕೊಂಡಿರುವ ಪ್ರಕರಣಗಳ ಸಂಖ್ಯೆಯನ್ನು ಕೇಳಿ ಅಚ್ಚರಿಗೊಳಗಾಗಿದ್ದಾರೆ. 30 ವರ್ಷಗಳ ದಾಂಪತ್ಯ ಮತ್ತು 11 ವರ್ಷಗಳ ವಿಚ್ಛೇದಿತ ಜೀವನದಲ್ಲಿ ಒಟ್ಟು 60 ಪ್ರಕರಣಗಳನ್ನು ಪರಸ್ಪರ ದಾಖಲಿಸಿಕೊಂಡಿದ್ದಾರೆ.
ಮಧ್ಯಸ್ಥಿಕೆಗೆ ಕಾಲ ಹಿಡಿಯುತ್ತದೆ. ಈ ನಡುವೆ ಬಾಕಿಯಿರುವ ಪ್ರಕರಣಗಳನ್ನು ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂದು ಪೀಠ ಸ್ಪಷ್ಟನೆ ನೀಡಿದೆ.
'ಎರಡನ್ನೂ ಏಕಕಾಲಕ್ಕೆ ಪಡೆಯಲು ಸಾಧ್ಯವಿಲ್ಲ. ಕೇಕನ್ನು ಉಳಿಸಿಕೊಳ್ಳುವುದು ಅಥವಾ ತಿನ್ನುವುದು ಏಕಕಾಲಕ್ಕೆ ಸಾಧ್ಯವಿಲ್ಲ' ಎಂದು ಮಹಿಳೆಗೆ ಕೋರ್ಟ್ ಬುದ್ಧಿವಾದ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.