
ನವದೆಹಲಿ: 'ನ್ಯಾಯಾಂಗ ಭ್ರಷ್ಟಾಚಾರ' ಕುರಿತ ಅಧ್ಯಾಯ ಸೇರಿಸಲಾಗಿದ್ದ 8ನೇ ತರಗತಿಯ ಎನ್ಸಿಇಆರ್ಟಿ ಪಠ್ಯಪುಸ್ತಕವನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಎಲ್ಲ ಪುಸ್ತಕಗಳ ಜಪ್ತಿಗೆ ಆದೇಶಿಸಿರುವ ನ್ಯಾಯಾಲಯ, ಡಿಜಿಟಲ್ ಪ್ರತಿ ತೆಗೆದುಹಾಕುವಂತೆ ಆದೇಶಿಸಿದೆ.
ಅಲ್ಲದೇ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಕೂಡಲೇ ತನ್ನ ನಿರ್ದೆಶನಗಳನ್ನು ಪಾಲಿಸುವಂತೆ ಆದೇಶಿಸಿದೆ. ಯಾವುದೇ ವಿಧದಲ್ಲಿ ನಿರ್ದೇಶನಗಳನ್ನು ಉಲ್ಲಂಘಿಸಿದರೆ ಗಂಭೀರ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಲಯ ಎಚ್ಚರಿಸಿದೆ.
ಈ ಸಂಬಂಧ ಎನ್ಸಿಇಆರ್ಟಿ ನಿರ್ದೇಶಕರು, ಶಾಲಾ ಶಿಕ್ಷಣ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ನೀಡಿರುವ ನ್ಯಾಯಾಲಯ, ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿದೆ.
ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಮತ್ತು ನ್ಯಾಯಾಂಗದ ಘನತೆಯನ್ನು ಕುಗ್ಗಿಸಲು ಉದ್ದೇಶಪೂರ್ವಕವಾಗಿ ನಡೆಸಲಾದ ಕ್ರಮ ಇದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ ಹೇಳಿದೆ.
ನ್ಯಾಯಾಂಗದ ಮೇಲೆ ಶಾಶ್ವತ ಪರಿಣಾಮ ಬೀರುವ ಇಂತಹ ದುಷ್ಕೃತ್ಯವು ಕ್ರಿಮಿನಲ್ ನ್ಯಾಯಾಂಗ ನಿಂದನೆಯ ವ್ಯಾಖ್ಯಾನದ ವ್ಯಾಪ್ತಿಗೆ ಬರುತ್ತದೆ ಎಂದು ಪೀಠ ಹೇಳಿದೆ.
‘ನಾವು ಈ ಕುರಿತ ಕೂಲಂಕಷ ತನಿಖೆ ನಡೆಸಲು ಬಯಸುತ್ತೇವೆ’ಎಂದು ಪೀಠ ಹೇಳಿದೆ.
ಇಂತವನ್ನು ನಿಯಂತ್ರಿಸದಿದ್ದರೆ, ನ್ಯಾಯಾಂಗದ ಮೇಲಿನ ಜನರ ನಂಬಿಕೆಯನ್ನು ಇದು ಹಾಳು ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ. ಈ ಸಂಬಂಧಿತ ಯಾರನ್ನೂ ಶಿಕ್ಷೆ ವಿಧಿಸದೇ ಬಿಡಲಾಗುವುದಿಲ್ಲ ಎಂದಿದೆ.
‘ಇದಕ್ಕೆ ಯಾರು ಹೊಣೆಗಾರರು ಎಂಬುದನ್ನು ಕಂಡುಹಿಡಿಯುವುದು ನ್ಯಾಯಾಂಗದ ಮುಖ್ಯಸ್ಥರಾಗಿ ನನ್ನ ಕರ್ತವ್ಯ; ತಪ್ಪಿತಸ್ಥರ ತಲೆದಂಡವಾಗಬೇಕು’ ಎಂದು ಸಿಜೆಐ ಹೇಳಿದ್ದಾರೆ.
ನ್ಯಾಯಾಂಗದ ಮಾನಹಾನಿ ಮಾಡಲು ಆಳವಾಗಿ ಬೇರೂರಿರುವ, ಯೋಜಿತ ಪಿತೂರಿ ನಡೆಯುತ್ತಿರುವಂತೆ ತೋರುತ್ತಿದೆ ಎಂದು ಸಿಜೆಐ ಸೂರ್ಯ ಕಾಂತ್ ಕಿಡಿಕಾರಿದ್ದಾರೆ.
ಬುಧವಾರದ ಎನ್ಸಿಇಆರ್ಟಿ ವಿವರಣೆಯನ್ನು ಪ್ರಸ್ತಾಪಿಸಿದ ಸಿಜೆಐ, ಅದರಲ್ಲಿ ಕ್ಷಮೆ ಕೇಳುವ ಬಗ್ಗೆ ಒಂದು ಪದವನ್ನೂ ಉಲ್ಲೇಖಿಸಿಲ್ಲ. ಬದಲಿಗೆ, ಪಠ್ಯವನ್ನು ಸಮರ್ಥಿಸಿಕೊಳ್ಳುವ ಯತ್ನ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ವಿಚಾರಣೆಯನ್ನು ಮಾರ್ಚ್ 11ಕ್ಕೆ ಮುಂದೂಡಿದ್ದಾರೆ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.