
ನವದೆಹಲಿ: ‘ನೀರಜ್ ಪಾಂಡೆ ಅವರ ನಿರ್ಮಾಣದ, ನಟ ಮನೋಜ್ ಬಾಜಪೇಯ್ ನಟನೆಯ ‘ಘೂಸಖೋರ್ ಪಂಡಿತ್’ ಸಿನಿಮಾದ ಹೆಸರನ್ನು ಬದಲಾಯಿಸಿ, ಪ್ರಚಾರ ಸಾಮಗ್ರಿ ಗಳನ್ನು ಹಿಂದಕ್ಕೆ ಪಡೆಯಲು ಒಪ್ಪಿಗೆ ನೀಡಿದ ಕಾರಣ, ನೆಟ್ಫ್ಲಿಕ್ಸ್ ಸಂಸ್ಥೆಯ ವಿರುದ್ಧ ದಾಖಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಿಲೇವಾರಿ ಮಾಡಿದೆ.
‘ಹೆಸರು ಬದಲಾಯಿಸುವ ಕುರಿತು ನೀರಜ್ ಪಾಂಡೆ ಪ್ರಮಾಣಪತ್ರ ಸಲ್ಲಿಸಿದ ಕಾರಣ, ಈ ವಿವಾದಕ್ಕೆ ಎಲ್ಲಾ ರೀತಿಯಿಂದಲೂ ಅಂತ್ಯ ಸಿಗುವ ನಿರೀಕ್ಷೆಯಿದೆ. ಹೀಗಾಗಿ ಅರ್ಜಿಯನ್ನು ವಿಲೇವಾರಿ ಮಾಡಲಾಗುವುದು’ ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ಪೀಠವು ತಿಳಿಸಿದೆ.
‘ಸಿನಿಮಾಕ್ಕೆ ಹೊಸ ಹೆಸರು ಇನ್ನಷ್ಟೇ ಅಂತಿಮವಾಗಬೇಕಿದೆ. ಹಿಂದಿನ ಹೆಸರಿಗೆ ಹೋಲುವಂತಿರುವುದಿಲ್ಲ. ‘ಘೂಸಖೋರ್ ಪಂಡಿತ್’ ಶೀರ್ಷಿಕೆಯನ್ನು ಗೌರವಪೂರ್ವಕವಾಗಿ ಹಿಂದಕ್ಕೆ ಪಡೆದಿದ್ದೇನೆ. ಯಾವುದೇ ರೀತಿಯಿಂದಲೂ ಅದನ್ನು ಬಳಸುವುದಿಲ್ಲ’ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ನೀರಜ್ ಪಾಂಡೆ ತಿಳಿಸಿದ್ದರು.
ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಬಿಡುಗಡೆ ತಡೆಹಿಡಿಯುವಂತೆ ಭಾರತೀಯ ಬ್ರಾಹ್ಮಣ ಸಮಾಜದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅತುಲ್ ಮಿಶ್ರಾ ಅವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.