ನವದೆಹಲಿ: ಭಾರತದಲ್ಲಿ ಅಪರಾಧ ಎಸಗುವ ವಿದೇಶಿ ಪ್ರಜೆಗಳು ಕಾನೂನಿನ ಕುಣಿಕೆಯಿಂದ ಪಾರಾಗದಂತೆ ನೋಡಿಕೊಳ್ಳಲು ಸೂಕ್ತ ನೀತಿಯೊಂದರ ಅಗತ್ಯವಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.
ವಂಚನೆ ಪ್ರಕರಣದ ಆರೋಪ ಎದುರಿಸುತ್ತಿರುವ ವಿದೇಶಿ ಪ್ರಜೆಯೊಬ್ಬರು ಜಾಮೀನಿನಲ್ಲಿ ಹೊರಬಂದು, ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವುದು ತನ್ನ ಗಮನಕ್ಕೆ ಬಂದಾಗ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ.
ಆರೋಪಿ, ನೈಜೀರಿಯಾದ ಪ್ರಜೆ ಅಲೆಕ್ಸ್ ಡೇವಿಡ್ಗೆ ಜಾಮೀನು ಮಂಜೂರು ಮಾಡಿ ಜಾರ್ಖಂಡ್ ಹೈಕೋರ್ಟ್ 2022ರ ಮೇನಲ್ಲಿ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ಡಿಸೆಂಬರ್ 4ರಂದು ರದ್ದುಗೊಳಿಸಿತ್ತು.
ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತಾ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್ ಅವರ ಪೀಠ ಆಗಸ್ಟ್ 26ರಂದು ಈ ಪ್ರಕರಣದ ವಿಚಾರಣೆ ನಡೆಸಿದೆ. ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ನೈಜೀರಿಯಾ ಪ್ರಜೆಯನ್ನು ಹಸ್ತಾಂತರಿಸುವ ಬಗ್ಗೆ ನೈಜೀರಿಯಾ ಮತ್ತು ಭಾರತದ ನಡುವೆ ಯಾವುದೇ ದ್ವಿಪಕ್ಷೀಯ ಒಪ್ಪಂದವಿಲ್ಲ ಎಂದು ಈ ವೇಳೆ ಪೀಠ ಹೇಳಿದೆ.
‘ಜಾಮೀನು ರದ್ದು ಮಾಡಿದ ಆದೇಶವನ್ನು ದೃಢೀಕರಿಸಿ ರಜಾಕಾಲದ ವಿಶೇಷ ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ. ಆದರೆ, ವಿದೇಶಿ ಪ್ರಜೆಗಳು ಭಾರತದಲ್ಲಿ ಅಪರಾಧ ಎಸಗಿದ ನಂತರ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ನೀತಿ ರೂಪಿಸುವ ಅಥವಾ ತನಗೆ ಸೂಕ್ತ ಎನಿಸುವ ಕ್ರಮ ಜರುಗಿಸುವ ಮುಕ್ತ ಅವಕಾಶವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತಿದ್ದೇವೆ’ ಎಂದು ಪೀಠ ಹೇಳಿದೆ.
ಡೇವಿಡ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಜೊತೆಗೆ ವಂಚನೆ ಸೇರಿದಂತೆ ವಿವಿಧ ಅಪರಾಧಗಳ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಹೈಕೋರ್ಟ್ನಿಂದ ಜಾಮೀನು ಪಡೆದ ನಂತರ ಡೇವಿಡ್ ತಲೆಮರೆಸಿಕೊಂಡಿರುವುದನ್ನು ಪೀಠದ ಗಮನಕ್ಕೆ ತರಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.