ADVERTISEMENT

ಮಸೂದೆಗೆ ಸಹಿ ಹಾಕಲು ರಾಜ್ಯಪಾಲ, ರಾಷ್ಟ್ರಪತಿಗೆ ಸಮಯ ಮಿತಿ ಇಲ್ಲ: ಸುಪ್ರೀಂ ಕೋರ್ಟ್

ಪಿಟಿಐ
Published 20 ನವೆಂಬರ್ 2025, 10:31 IST
Last Updated 20 ನವೆಂಬರ್ 2025, 10:31 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ರಾಜ್ಯಗಳ ವಿಧಾನಸಭೆ ಒಪ್ಪಿಗೆ ನೀಡಿದ ಮಸೂದೆಗಳಿಗೆ ಸಹಿ ಹಾಕಲು ರಾಜ್ಯಪಾಲರು ಹಾಗೂ ರಾಷ್ಟ್ರಪತಿಗೆ ಸಮಯ ನಿಗದಿಪಡಿಸಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ ಮಸೂದೆಗಳಿಗೆ ‘ಪರಿಗಣಿತ ಒಪ್ಪಿಗೆ’ ನೀಡುವುದನ್ನೂ ಕೋರ್ಟ್ ನಿಷೇಧಿಸಿದೆ.

ಈ ಬಗ್ಗೆ ಸರ್ವಾನುಮತದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ, ಸಂವಿಧಾನದ 200ನೇ ವಿಧಿಯಡಿ ನೀಡಿರುವ ಅಧಿಕಾರವನ್ನು ಮೀರಿ ರಾಜ್ಯಪಾಲರು ವರ್ತಿಸುವಂತಿಲ್ಲ ಎಂದೂ ಹೇಳಿದೆ.

‘ರಾಜ್ಯ ವಿಧಾನಸಭೆಗಳು ಒಪ್ಪಿಗೆ ನೀಡಿರುವ ಮೂಸೂದೆಗಳ ಮೇಲೆ ಕುಳಿತುಕೊಳ್ಳುವ ಮುಕ್ತ ಅಧಿಕಾರ ರಾಜ್ಯಪಾಲರಿಗೆ ಇಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ನೇತೃತ್ವದ ಪೀಠ ಅಭಿಪ್ರಾಯಪಟ್ಟಿತು.

ADVERTISEMENT

ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಂ ನಾಥ್, ಪಿ.ಎಸ್ ನರಸಿಂಹ ಹಾಗೂ ಎ.ಎಸ್ ಚಂದೂರ್ಕರ್ ಅವರೂ ಪೀಠದಲ್ಲಿದ್ದರು.

ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ರಾಜ್ಯಪಾಲರಿಗೆ ಸಮಯಾವಕಾಶ ನಿಗದಿ ಮಾಡುವುದು ಸಂವಿಧಾನದಲ್ಲಿ ನೀಡಲಾಗಿರುವ ಹೊಂದಿಕೊಳ್ಳುವ ಗುಣಕ್ಕೆ ವಿರುದ್ಧ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ತೀರ್ಪಿನ ಒಂದು ಭಾಗವನ್ನು ಓದಿದ ಸಿಜೆಐ, 200ನೇ ವಿಧಿಯಡಿ ರಾಜ್ಯಪಾಲರಿಗೆ ಮೂರು ಅವಕಾಶಗಳಿವೆ– ಮಸೂದೆಗೆ ಸಹಿ ಹಾಕುವುದು, ಅದನ್ನು ರಾಷ್ಟ್ರಪತಿಗೆ ಶಿಫಾರಸು ಮಾಡುವುದು ಅಥವಾ ಒಪ್ಪಿಗೆಯನ್ನು ತಡೆಹಿಡಿದು ಉಲ್ಲೇಖಗಳೊಂದಿಗೆ ವಿಧಾನಸಭೆಗೆ ಮರಳಿಸುವುದು.

ಈ ಮೂರು ಸಾಂವಿಧಾನಿಕ ಅವಕಾಶಗಳನ್ನು ಬಳಸಿಕೊಳ್ಳುವ ವಿವೇಚನೆ ರಾಜ್ಯಪಾಲರಿಗೆ ಬಿಟ್ಟಿದ್ದು. 200ನೇ ವಿಧಿಯಡಿ ಯಾವುದೇ ಅಧಿಕಾರ ಚಲಾಯಿಸುವಾಗ ಮಂತ್ರಿ ಪರಿಷತ್ತಿನ ಅಭಿಪ್ರಾಯವೂ ತೆಗೆದುಕೊಳ್ಳಬೇಕಾಗಿಲ್ಲ ಎಂದೂ ಕೋರ್ಟ್ ಹೇಳಿದೆ.

200ನೇ ವಿಧಿಯಡಿ ರಾಜ್ಯಪಾಲರ ಕರ್ತವ್ಯ ನಿರ್ವಹಣೆಯು ನ್ಯಾಯಾಂಗ ಪ್ರಕ್ರಿಯೆಗೆ ಒಳಪಡುವುದಿಲ್ಲ. ಅವರ ನಿರ್ಧಾರಕ್ಕೆ ನ್ಯಾಯಾಲಯ ಮಧ್ಯಪ್ರವೇಶಿಸಲೂ ಅಸಾಧ್ಯ ಎಂದು ಹೇಳಿದೆ.

‘ಯಾವುದೇ ಸಮಯ ನಿಗದಿ ಮಾಡುವ ಹಾಗೂ ರಾಜ್ಯಪಾಲರು ಅಧಿಕಾರಗಳನ್ನು ಚಲಾಯಿಸುವ ರೀತಿಯ ಬಗ್ಗೆ ಸಂವಿಧಾನದಲ್ಲಿ ಯಾವುದೇ ಉಲ್ಲೇಖ ಇಲ್ಲದಿರುವಾಗ, 200ನೇ ವಿಧಿಯಡಿ ಅಧಿಕಾರವನ್ನು ಚಲಾಯಿಸಲು ನ್ಯಾಯಾಂಗದ ಮೂಲಕ ಸಮಯ ನಿಗದಿ ಮಾಡುವುದು ಈ ಕೋರ್ಟ್‌ಗೆ ಸೂಕ್ತವಲ್ಲ’ ಎಂದು ಪೀಠ ಹೇಳಿದೆ.

ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆ ಎಂದು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದೆ ವಿಚಾರಣೆ ನಡೆಸಿದ್ದ, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಅವರ ನೇತೃತ್ವದ ಪೀಠ, ರಾಜ್ಯಗಳ ವಿಧಾನಸಭೆ ಒಪ್ಪಿಗೆ ನೀಡಿದ ಮಸೂದೆಗಳಿಗೆ ಸಹಿ ಹಾಕಲು ರಾಜ್ಯಪಾಲರ ಹಾಗೂ ರಾಷ್ಟ್ರಪತಿಗೆ ಮೂರು ತಿಂಗಳ ಗಡುವು ವಿಧಿಸಿತ್ತು.

2025 ಏಪ್ರಿಲ್ 8ರ ಈ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್‌ಗೆ ರಾಷ್ಟ್ರಪತಿ 14 ಪ್ರಶ್ನೆಗಳನ್ನು ಕೇಳಿದ್ದರು. ಈ ಪ್ರಶ್ನೆಗಳ ಬಗ್ಗೆ ಚರ್ಚಿಸಲು ಐವರು ಸದಸ್ಯರ ಪೀಠ ಒಪ್ಪಿಕೊಂಡಿತ್ತು.

ಸಂವಿಧಾನದ 143 (1)ನೇ ವಿಧಿಯಡಿ ಇರುವ ಅಧಿಕಾರ ಉಪಯೋಗಿಸಿಕೊಂಡು ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಪ್ರಶ್ನೆಗಳನ್ನು ಎತ್ತಿದ್ದರು.

‘ಸಂವಿಧಾನದಲ್ಲಿ, ಅದರಲ್ಲಿಯೂ ವಿಶೇಷವಾಗಿ 142ನೇ ವಿಧಿಯಡಿ ‘ಪರಿಗಣಿತ ಸಮ್ಮತಿ’ಗೆ ಅವಕಾಶ ಇಲ್ಲ ಎನ್ನುವುದನ್ನು ನಾವು ಈ ಮೂಲಕ ಸ್ಪಷ್ಟೀಕರಿಸುತ್ತೇವೆ’ ಎಂದೂ ಕೋರ್ಟ್ ಹೇಳಿದೆ.

ಸಂವಿಧಾನದ 142ನೇ ವಿಧಿಯು, ಯಾವುದೇ ವಿಷಯದಲ್ಲಿ ಸಂಪೂರ್ಣ ನ್ಯಾಯ ನೀಡಲು ಯಾವುದೇ ತೀರ್ಪು ನೀಡುವ ಅವಕಾಶ ಸುಪ್ರೀಂ ಕೋರ್ಟ್‌ಗೆ ನೀಡುತ್ತದೆ.

ಅಲ್ಲದೆ, ಯಾವುದೇ ಕಾರಣ ನೀಡದೆ ಮಸೂದೆಗಳಿಗೆ ಒಪ್ಪಿಗೆ ನೀಡದೆ ಅನಿರ್ದಿಷ್ಟ ಅವಧಿಗೆ ಇಟ್ಟುಕೊಂಡಲ್ಲಿ, ನಿಗದಿತ ಸಮಯದೊಳಗೆ ಸಂವಿಧಾನದ ಅಡಿಯಲ್ಲಿ ಕರ್ತವ್ಯವನ್ನು ನಿರ್ವಹಿಸಲು ರಾಜ್ಯಪಾಲರಿಗೆ ನ್ಯಾಯಾಲಯವು ಸೀಮಿತ ಆದೇಶವನ್ನು ಹೊರಡಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ರಾಜ್ಯಪಾಲರನ್ನು ವೈಯಕ್ತಿಕವಾಗಿ ನ್ಯಾಯಾಂಗ ಪ್ರಕ್ರಿಯೆಗಳಿಗೆ ಒಳಪಡಿಸಲು ಸಂಪೂರ್ಣ ನಿರ್ಬಂಧವಿದೆ ಎಂದು ಎಂದು 361ನೇ ವಿಧಿಯನ್ನು ಉಲ್ಲೇಖಿಸಿ ಕೋರ್ಟ್ ಹೇಳಿದೆ. ರಾಜ್ಯಪಾಲರು ಕಾನೂನು ಪ್ರಕ್ರಿಯೆಗಳಿಂದ ವೈಯಕ್ತಿಕವಾಗಿ ವಿನಾಯಿತಿ ಪಡೆದರೂ, ಅವರ ಕಚೇರಿಯು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ ಎಂದು ಕೋರ್ಟ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.