ADVERTISEMENT

ಸಿಎಎ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ ಅರ್ಜಿ ವಿಚಾರಣೆ ಮೇ 5ರಿಂದ: ಸುಪ್ರೀಂ

ಪಿಟಿಐ
Published 19 ಫೆಬ್ರುವರಿ 2026, 15:34 IST
Last Updated 19 ಫೆಬ್ರುವರಿ 2026, 15:34 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಪೌರತ್ವ ತಿದ್ಡುಪಡಿ ಕಾಯ್ದೆ-2019 (ಸಿಎಎ) ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌) ಸೇರಿದಂತೆ 200 ಅರ್ಜಿಗಳ ಅಂತಿಮ ವಿಚಾರಣೆಯನ್ನು ಮೇ 5ರಿಂದ ಆರಂಭಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

2014ರ ಡಿಸೆಂಬರ್‌ 31ಕ್ಕೂ ಮುಂಚೆ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಗಾನಿಸ್ತಾನದಿಂದ ಭಾರತಕ್ಕೆ ಬಂದಿರುವ ಹಿಂದೂ, ಸಿಖ್‌, ಬೌದ್ಧರು, ಕ್ರೈಸ್ತರು, ಜೈನ್‌ ಹಾಗೂ ಪಾರ್ಸಿ ಸಮುದಾಯಗಳಿಗೆ ಸಿಎಎ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಭಾರತದ ಪೌರತ್ವ ನೀಡಲು ಅವಕಾಶ ಕಲ್ಪಿಸಲಾಗಿದೆ.

2019–2020ರಿಂದ ಬಾಕಿ ಉಳಿದಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಮೇ 5ರಿಂದ ಆರಂಭಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿಪುಲ್ ಎಂ.ಪಾಂಚೋಲಿ ಪೀಠವು ತಿಳಿಸಿದೆ. 

ADVERTISEMENT

ಐಯುಎಂಎಲ್‌ ಅರ್ಜಿದಾರರ ಅರ್ಜಿ ವಿಚಾರಣೆಯನ್ನು ಒಂದೂವರೆ ದಿನಗಳ ನಡೆಸುವುದಾಗಿ ತಿಳಿಸಿದ ನ್ಯಾಯಪೀಠ, ಈ ವಿಚಾರದ ಕುರಿತು ಕೇಂದ್ರಕ್ಕೆ ವಾದ ಮಂಡಿಸಲು ಒಂದು ದಿನ ಕಾಲಾವಕಾಶ ನೀಡುವುದಾಗಿ ತಿಳಿಸಿದೆ. ಎರಡು ಕಡೆಗಳ ಅರ್ಜಿಯನ್ನು ಪೀಠವು ಮೇ 12ರ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.

ಹೆಚ್ಚುವರಿ ದಾಖಲೆಗಳನ್ನು ನಾಲ್ಕು ವಾರಗಳ ಒಳಗಾಗಿ ಸಲ್ಲಿಸಬೇಕು ಎಂದು ಅರ್ಜಿದಾರರಿಗೆ ನ್ಯಾಯಾಲಯವು ಸೂಚಿಸಿದೆ. 

ಇಡೀ ದೇಶಕ್ಕೆ ಅನ್ವಯಿಸುವ ಅರ್ಜಿಯನ್ನು ಮೊದಲು ಆಲಿಸುವುದಾಗಿ ತಿಳಿಸಿದ ನ್ಯಾಯಪೀಠ, ಇದಾದ ಬಳಿಕ ಅಸ್ಸಾಂ ಹಾಗೂ ತ್ರಿಪುರಾಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುವುದಾಗಿ ತಿಳಿಸಿತು.

ಅಸ್ಸಾಂನ ಸಮಸ್ಯೆ ದೇಶದ ಉಳಿದ ಭಾಗಗಳಿಗೆ ಹೋಲಿಸಿದರೆ, ಭಿನ್ನವಾಗಿದೆ. ಪೌರತ್ವ ಪಡೆಯಲು ಇಲ್ಲಿ 1971ರ ಮಾರ್ಚ್‌ 24 ಕಟ್‌–ಆಫ್ ದಿನಾಂಕ ನಿಗದಿಪಡಿಸಲಾಗಿತ್ತು, ಸಿಎಎನ ಅಡಿಯಲ್ಲಿ 2014ರ ಮಾರ್ಚ್‌ 31ರವರೆಗೆ ಕಟ್‌–ಆಫ್‌ ದಿನಾಂಕ ವಿಸ್ತರಿಸಲಾಗಿದೆ. 

ಸಿಎಎ ಪೌರತ್ವ ನಿಯಮಗಳಿಗೆ ತಡೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಮಧ್ಯಂತರ ಅರ್ಜಿಗಳಿಗೆ ಪ್ರತಿಕ್ರಿಯಿಸುವಂತೆ ಪೀಠವು 2024ರ ಮಾರ್ಚ್ 19ರಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಆ ಸಂದರ್ಭದಲ್ಲಿ ಈ ಅರ್ಜಿಯನ್ನು ಕೊನೆಯದಾಗಿ ವಿಚಾರಣೆ ನಡೆಸಲಾಗಿತ್ತು. ಆದಾಗ್ಯೂ, ಅರ್ಜಿಗಳನ್ನು ಪ್ರತಿನಿಧಿಸುವ ಹಿರಿಯ ವಕೀಲರ ಅರ್ಜಿಯ ಕೋರಿಕೆಯಂತೆ, ಸಿಎಎಗೆ ಪರಿಣಾಮ ಬೀರುವ ನಿಯಮಗಳ ಮೇಲಿನ ಕಾರ್ಯಾಚರಣೆಯನ್ನು ತಡೆಹಿಡಿಯಲು ನ್ಯಾಯಪೀಠ ನಿರಾಕರಿಸಿತು.

ರಾಷ್ಟ್ರಪತಿಯವರು 2019ರ ಡಿಸೆಂಬರ್‌ 12ರಂದು ಸಿಎಎ ತಿದ್ದುಪಡಿ ಕಾಯ್ದೆಗೆ ಒಪ್ಪಿಗೆ ನೀಡಿದ ನಂತರ ಕಾಯ್ದೆಯಾಗಿ ಮಾರ್ಪಟ್ಟಿದೆ. 

ಸಿಎಎ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ 200 ಅರ್ಜಿಗಳು ಸಲ್ಲಿಕೆಯಾಗಿವೆ.

ಇದರಲ್ಲಿ ಐಯುಎಂಎಲ್‌ ಮಾತ್ರವಲ್ಲದೇ, ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌, ಆರ್‌ಜೆಡಿ ನಾಯಕ ಮನೋಜ್ ಜಾ, ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಹಾಗೂ ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ ಅರ್ಜಿ ಸಲ್ಲಿಸಿದ ಪ್ರಮುಖರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.