ನವದೆಹಲಿ: ಕೇರಳದ ಕರಾವಳಿಯಲ್ಲಿ 2012ರ ಫೆಬ್ರುವರಿಯಲ್ಲಿ ಇಟಲಿಯ ನೌಕಪಡೆಯವರು ಹತ್ಯೆ ಮಾಡಿದ್ದ ಇಬ್ಬರು ಭಾರತೀಯ ಮೀನುಗಾರರ ಕುಟುಂಬಕ್ಕೆ ₹10 ಕೋಟಿ ಪರಿಹಾರ ವಿತರಿಸುವ ಕುರಿತು ಜೂನ್ 15ರಂದು ಆದೇಶ ಹೊರಡಿಸುವುದಾಗಿ ಶುಕ್ರವಾರ ಸುಪ್ರೀಂ ಕೋರ್ಟ್ ತಿಳಿಸಿದ್ದು, ಈ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಇಟಲಿ ಸರ್ಕಾರ ಕಾನೂನು ಕ್ರಮ ಜರುಗಿಸಲಿದೆ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎಂ ಆರ್ ಷಾ ಅವರನ್ನೊಳಗೊಂಡ ರಜಾಕಾಲದ ಪೀಠ, ಸಂತ್ರಸ್ತ ಕುಟುಂಬದವರಿಗೆ ಸರಿಯಾಗಿ ಪರಿಹಾರ ವಿತರಣೆಯಾಗುವಂತೆ ನೋಡಿಕೊಳ್ಳುಲು ಕೇರಳ ಹೈಕೋರ್ಟ್ಗೆ ಹೇಳುವ ಸಾಧ್ಯತೆ ಇದೆ.
ಅದೇ ದಿನದಂದು ಸುಪ್ರೀಂಕೋರ್ಟ್, ಮೀನುಗಾರರನ್ನು ಕೊಂದಿದ್ದಕ್ಕಾಗಿ ಇಟಲಿಯ ನೌಕಾಪಡೆ ವಿರುದ್ಧ ಸಲ್ಲಿಸಿರುವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಆದೇಶ ಹೊರಡಿಸಲಿದೆ. ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನಿಯಮಾವಳಿ ಪ್ರಕಾರ ಇಟಲಿ ಸರ್ಕಾರ, ಇಟಲಿಯ ನೌಕಾಪಡೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುತ್ತದೆ ಎಂದು ಪೀಠ ಹೇಳಿದೆ.
ಈ ಹಿಂದೆ ‘ಇಟಲಿ ಸರ್ಕಾರ ಮೀನುಗಾರರ ಕುಟುಂಬಗಳ ಸದಸ್ಯರಿಗೆ ₹10 ಕೋಟಿ ಪರಿಹಾರ ನೀಡುವ ಪ್ರಕ್ರಿಯೆ ಆರಂಭಿಸಿದೆ‘ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.
ಫೆಬ್ರವರಿ 2012 ರಲ್ಲಿ, ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ಮೀನುಗಾರಿಕಾ ಹಡಗಿನಲ್ಲಿದ್ದ ಇಬ್ಬರು ಭಾರತೀಯ ಮೀನುಗಾರರನ್ನು ಇಟಲಿಯ ನೌಕಾಪಡೆಯವರು ಕೊಂದಿದ್ದರು ಎಂದು ಭಾರತ ಆರೋಪಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.