ನವದೆಹಲಿ: ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಗೆ (ಎನ್ಸಿಎಲ್ಎಟಿ) ಹಂಗಾಮಿ ಅಧ್ಯಕ್ಷರನ್ನಾಗಿ ನ್ಯಾಯಮೂರ್ತಿ ಎಂ. ವೇಣುಗೋಪಾಲ್ ಅವರನ್ನು ತರಾತುರಿಯಲ್ಲಿ ನೇಮಿಸಿದ್ದಕ್ಕೆ ಸುಪ್ರೀಂಕೋರ್ಟ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಲ್. ನಾಗೇಶ್ವರ ರಾವ್ ಅವರನ್ನು ಒಳಗೊಂಡ ನ್ಯಾಯಪೀಠವು ಈ ಕುರಿತ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.
ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಗುರುವಾರದ ವಿಚಾರಣೆ ವೇಳೆ ಹಾಜರಿರಬೇಕು ಎಂದು ಪೀಠ ಸೂಚಿಸಿದೆ.
ಎನ್ಸಿಎಲ್ಎಟಿ ಅಧ್ಯಕ್ಷರಾದ ಚೀಮಾ ಅವರ ನಿವೃತ್ತಿಗೆ 10 ದಿನ ಮೊದಲೇ ವೇಣುಗೋಪಾಲ್ ಅವರನ್ನು ನೇಮಿಸಲಾಗಿದೆ. ಇದು ಹೇಗೆ ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಕೇಂದ್ರ ಸರ್ಕಾರ ಎನ್ಸಿಎಲ್ಟಿಗೆ 8 ನ್ಯಾಯಾಂಗ ಸದಸ್ಯರು ಮತ್ತು 10 ತಾಂತ್ರಿಕ ಸದಸ್ಯರನ್ನು ನೇಮಿಸುವ ಪ್ರಸ್ತಾವನೆಗೆ ಶನಿವಾರ ಅನುಮೋದನೆ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.