
ಕೋರ್ಟ್
ತಿರುವನಂತಪುರ: ಎನ್ಸಿಇಆರ್ಟಿ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ವಿವಾದದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿರುವುದು ಸ್ವಾಗತಾರ್ಹ ಎಂದು ಕೇರಳ ಶಿಕ್ಷಣ ಸಚಿವ ವಿ.ಶಿವನ್ಕುಟ್ಟಿ ಶುಕ್ರವಾರ ಹೇಳಿದ್ದಾರೆ. ಜತೆಗೆ ಇತ್ತೀಚೆಗೆ ನಡೆದಿರುವ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕೆಂದೂ ಕೋರಿದ್ದಾರೆ.
ಫೇಸ್ಬುಕ್ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಪೋಸ್ಟ್ ಮಾಡಿರುವ ಅವರು, ‘ನ್ಯಾಯಾಂಗವನ್ನು ಅವಹೇಳನ ಮಾಡುವಂತ ಪಠ್ಯಕ್ರಮ ರೂಪಿಸಿರುವುದರ ವಿರುದ್ಧ ಸುಪ್ರೀಂ ಕೋರ್ಟ್ ತೆಗೆದುಕೊಂಡಿರುವ ನಿಲುವು ಸ್ವಾಗತಾರ್ಹ. ವಿವಾದಾತ್ಮಕ ವಿಚಾರವನ್ನು ರಚಿಸಿದವರು ಹಾಗೂ ಅದನ್ನು ಪಠ್ಯದಲ್ಲಿ ಸೇರಿಸಲು ಅನುಮೋದಿಸಿದವರು ಇಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.
ಜತೆಗೆ, ‘ವಿದ್ಯಾರ್ಥಿಗಳಿಗೆ ನ್ಯಾಯಾಂಗದ ಕುರಿತು ತಪ್ಪು ಮಾಹಿತಿ ನೀಡುವುದು ಗಂಭೀರ ಅಪರಾಧ. ಯುವಜನತೆಗೆ ಸಾಂವಿಧಾನಿಕ ಸಂಸ್ಥೆಗಳನ್ನು ಗೌರವಿಸುವುದನ್ನು ಹೇಳಿಕೊಡಬೇಕು’ ಎಂದಿದ್ದಾರೆ.
ಅಲ್ಲದೇ, ಎನ್ಸಿಇಆರ್ಟಿಯ ಇತ್ತೀಚೆಗೆ ಕೈಗೊಂಡಿರುವ ಎಲ್ಲಾ ಪಠ್ಯಕ್ರಮಗಳಮ ಪರಿಷ್ಕರಣೆಯನ್ನು ಸ್ವತಂತ್ರ ತಜ್ಞರ ಸಮಿತಿ ಪರಿಶೀಲಿಸಬೇಕು. ಪರಿಷ್ಕರಣೆ ನೆಪದಲ್ಲಿ ಇತಿಹಾಸವನ್ನು, ಸಾಂವಿಧಾನಿಕ ಮೌಲ್ಯಗಳನ್ನು ಅಳಿಸಿಹಾಕುವ ಪ್ರಯತ್ನ ನಡೆದಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದೂ ಸಚಿವ ಆಗ್ರಹಿಸಿದ್ದಾರೆ.
ಪಠ್ಯಕ್ರಮದಿಂದ ಏಕಪಕ್ಷೀಯವಾಗಿ ಎನ್ಸಿಇಆರ್ಟಿ ಕೆಲವು ವಿಚಾರಗಳನ್ನು ಕೈಬಿಟ್ಟಿರುವ ಬಗ್ಗೆ ಈ ಹಿಂದೆಯೂ ಕೇರಳ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಜತೆಗೆ ಕೈಬಿಡಲಾಗಿದ್ದ ಪ್ರಮುಖ ಅಂಶಗಳನ್ನು ಮತ್ತೆ ಸೇರ್ಪಡೆಗೊಳಿಸಿ ಹೆಚ್ಚುವರಿ ಪುಸ್ತಕಗಳನ್ನೂ ಪ್ರಕಟಿಸಲಾಗಿತ್ತು ಎಂಬುದನ್ನೂ ಸಚಿವರು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.